ಬೆಂಗಳೂರು: 'ನೀರ್ ದೋಸೆ'ಯ ವಾಣಿಜ್ಯಾತ್ಮಕ ಯಶಸ್ಸಿನ ನಂತರ ನವರಸನಾಯಕ ಜಗ್ಗೇಶ್ ಬೆಳ್ಳಿತೆರೆಗೆ ಹಿಂದಿರುಗಿದ್ದಾರೆ. ನಟಿ ರಕ್ಷಿತಾ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಕಿರುತೆರೆಯ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಷೋ ಕಾರ್ಯಕ್ರಮದಲ್ಲಿಯೂ ನಿರತನಾಗಿರುವ ನಟ ಈಗ 'ಮೇಲುಕೋಟೆ ಮಂಜ' ಸಿನೆಮಾ ನಿರ್ದೇಶನದಲ್ಲೂ ಬ್ಯುಸಿ.
ಅವರ ಕಾಮಿಡಿ ಷೋ ಕಾರ್ಯಕ್ರಮದಲ್ಲಿ 'ಮೇಲುಕೋಟೆ ಮಂಜ' ಸಿನೆಮಾದ ಆಡಿಯೋ ಬಿಡುಗಡೆ ಮಾಡಲು ಸಜ್ಜಾಗಿರುವ ನಟ, ತಾವು ಗೀತರಚನಕಾರರಾಗಿರುವುದಾಗಿಯೂ ತಿಳಿಸುತ್ತಾರೆ. 'ಕಣ್ಮುಚ್ಚಿ ನಡೆದಾಗ ಯಾಕಿಂಗೆ ಹೇಳು ಬಾ...' ಎಂಬ ಡ್ಯುಯೆಟ್ ಚಿತ್ರಗೀತೆಯನ್ನು ಜಗ್ಗೇಶ್ ಬರೆದಿದ್ದು "ನಾನು ಜಯಂತ್ ಕಾಯ್ಕಿಣಿ ಅವರ ಅತಿ ದೊಡ್ಡ ಅಭಿಮಾನಿ ಮತ್ತು ಅವರ ಕೆಲಸಗಳನ್ನು ಒಂದು ದಶಕದಿಂದಲೂ ಗಮನಿಸುತ್ತಾ ಬಂದಿದ್ದೇನೆ. ನನ್ನ ಈ ಸಿನೆಮಾಗೆ ಗೀತೆ ರಚಿಸಲು ಅವರೇ ಸ್ಫೂರ್ತಿ" ಎನ್ನುತ್ತಾರೆ ನಿರ್ದೇಶಕ-ನಟ.
"ಉಳಿದ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ರಾಮನಾರಾಯಣ್ ಸಾಹಿತ್ಯ ರಚಿಸಿದ್ದು, ಗಿರಿ ಧವನ್ ಸಂಗೀತ ನೀಡಿರುವ ಒಂದು ಹಾಡಿಗೆ ಪುನೀತ್ ಕಂಠದಾನ ಮಾಡಿದ್ದಾರೆ" ಎಂದು ಕೂಡ ಜಗ್ಗೇಶ್ ತಿಳಿಸುತ್ತಾರೆ.
ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಲಿರುವ ಐಂದ್ರಿತಾ ರೇ 'ಮೇಲುಕೋಟೆ ಮಂಜ' ಸಿನೆಮಾದಲ್ಲಿ ನಾಯಕ ನಟಿ. ರಂಗಾಯಣ ರಘು ಮತ್ತು ಜೀವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ೧೪೧ ಸಿನೆಮಾಗಳಲ್ಲಿ ನಟಿಸಿರುವ ಜಗ್ಗೇಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos