ಬೆಂಗಳೂರು: ಕನ್ನಡ ನಟ ನಿಖಿಲ್ ಕುಮಾರ್ ಅವರು ನಟಿಸಿರುವುದು ಒಂದೇ ಸಿನೆಮಾ ಆದರೂ ಅವರ ಮಹತ್ವಾಕಾಂಕ್ಷೆಗೆ ಮಿತಿಯಿಲ್ಲ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿದ 'ಜಾಗ್ವಾರ್' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ ನಿಖಿಲ್ ಈಗ ಹಾಲಿವುಡ್ ಪ್ರವೇಶ ಪಡೆದಿದ್ದಾರೆ ಎನ್ನುತ್ತವೆ ಮೂಲಗಳು.
ಈ ಯೋಜನೆ ಬಗ್ಗೆ ಅಥವಾ ನಿರ್ದೇಶಕನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ, ಮೂಲಗಳು ತಿಳಿಸುವಂತೆ ಆಕ್ಷನ್ ದೃಶ್ಯಗಳ ತರಬೇತಿಗೆ ನಿಖಿಲ್ ಸದ್ಯಕ್ಕೆ ದುಬೈನಲ್ಲಿದ್ದಾರೆ ಮತ್ತು ನಿರ್ದೇಶಕನ ಜೊತೆಗೆ ಮಾತುಕತೆ ನಡೆಸುತ್ತಿದ್ದಾರಂತೆ. "ಅವರು ಹಾಲಿವುಡ್ ನಿರ್ದೇಶಕನ ಜೊತೆಗೆ ಗೌಪ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ" ಎಂದು ತಿಳಿಸುತ್ತಾರೆ ನಿಖಿಲ್ ಸಿನೆಮಾಗಳ ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ.
ಈ ಯೋಜನೆ ಅಧಿಕೃತವಾಗಿ ಘೋಷಣೆಯಾಗುವವರೆಗೆ ಅದರ ಬಗ್ಗೆ ವಿವರಗಳನ್ನು ಬಿಚ್ಚಿಡುವಂತಿಲ್ಲ. ಆದರೆ ನಿಖಿಲ್ ಅವರ ಹಾಲಿವುಡ್ ಸಿನೆಮಾ ಜನವರಿ ೨೦೧೮ ರಿಂದ ಚಿತ್ರೀಕರಣಗೊಳ್ಳುವುದು ಖಂಡಿತ. ಆದರೆ ಯೋಜನೆ ಪ್ರಾರಂಭಿಸುವುದಕ್ಕೂ ಮೊದಲು ಅವರು ಕಲೆಯನ್ನು ಕರಗತ ಮಾಡಿಕೊಂಡು ನಿಖರತೆ ಪಡೆಯುತ್ತಿದ್ದಾರೆ ಎನ್ನುತ್ತಾರೆ ಸುನಿಲ್.
ಈಮಧ್ಯೆ ಕನ್ನಡ ಸಿನೆಮಾ ಯೋಜನೆ ಜಾರಿಯಲ್ಲಿದ್ದು, ಮಾರ್ಚ್ ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. "ನಿರ್ದೇಶಕರಾದ ಎಸ್ ಕೃಷ್ಣ, ಹರ್ಷ ಮತ್ತು ಚೇತನ್ ಕುಮಾರ್ ಅವರುಗಳನ್ನು ನಿಖಿಲ್ ಭೇಟಿ ಮಾಡಿದ್ದಾರೆ ಮತ್ತು ಒಂದು ಸಾಲಿನ ಕಥೆಗಳನ್ನು ಕೇಳಿದ್ದಾರೆ. ಇನ್ನು ಕೆಲವು ಸುತ್ತಿನ ಚರ್ಚೆಯ ನಂತರ ಅವರು ಹಸಿರು ನಿಶಾನೆ ತೋರಲಿದ್ದಾರೆ" ಎನ್ನುತ್ತಾರೆ ಗೌಡ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಪಾದಾರ್ಪಣೆ ಮಾಡಿದ ಚಿತ್ರ 'ಜಾಗ್ವಾರ್' ಸಾಧಾರಣ ಯಶಸ್ಸು ಕಂಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos