ಚೆನ್ನೈ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ವಿರೋಧಿಸಿ ಸೋಮವಾರದಿಂದ ತಮಿಳುನಾಡಿನಾದ್ಯಂತ 1100 ಚಿತ್ರಮಂದಿರಗಳನ್ನು ಬಂದ್ ಮಾಜಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿರುವ ತಮಿಳುನಾಡು ಚಲನ ಚಿತ್ರ ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ತಮಿಳು ಚಿತ್ರ ನಿರ್ಮಾಪಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಿನ್ನೆಯಿಂದ ದೇಶಾದ್ಯಂತ ಜಿಎಸ್ ಟಿ ಜಾರಿಯಾಗಿದ್ದು, ಸಿನಿಮಾಗಳ ಮೇಲೆ ಜಿಎಸ್ಟಿ ಜೊತೆಗೆ ತಮಿಳುನಾಡು ಸರ್ಕಾರ ಶೇ. 30ರಷ್ಟು ಮುನ್ಸಿಪಲ್ ತೆರಿಗೆ ವಿಧಿಸುತ್ತಿರುವುದನ್ನು ಖಂಡಿಸಿ ಅನಿರ್ದಿಷ್ಟ ಧರಣಿ ನಡೆಸಲು ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ. ಆದರೆ ಇದಕ್ಕೆ ಚಿತ್ರ ನಿರ್ಮಾಪಕರು ವಿರೋಧ ವ್ಯಕ್ತಪಡಿಸಿದ್ದು, ನಿರ್ಧಾರ ಹಿಂಪಡೆಯುವಂತೆ ವಾಣಿಜ್ಯ ಮಂಡಳಿಗೆ ಒತ್ತಾಯಿಸಿದ್ದಾರೆ.
ಚಿತ್ರಮಂದಿರ ಬಂದ್ ನಿರ್ಧಾರ ಹಿಂಪಡೆಯುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿರುವುದಾಗಿ ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ, ನಟ ವಿಶಾಲ್ ಕೃಷ್ಣನ್ ಅವರು ಹೇಳಿದ್ದಾರೆ.
ಬಂದ್ ವಿಚಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಇತರೆ ಯಾವುದೇ ಸಂಘಟನೆಗಳನ್ನು ಗಮನಕ್ಕೆ ತರದೆ ಈ ನಿರ್ಧಾರ ತೆಗೆದುಕೊಂಡಿದೆ. ತೆರಿಗೆ ಕುರಿತು ಸಂಪೂರ್ಣ ಮಾಹಿತಿ ಪಡೆದು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲು ನಮಗೆ ಸಮಯ ಬೇಕು. ಹೀಗಾಗಿ ಬಂದ್ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿಲಾಗಿದೆ ಎಂದು ವಿಶಾಲ್ ತಿಳಿಸಿದ್ದಾರೆ.
ಈ ಮಧ್ಯೆ, ಜಿಎಸ್ಟಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ನೀತಿ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಹೋರಾಟಕ್ಕೆ ಸಜ್ಜಾಗಿರುವುದಾಗಿ ತಮಿಳುನಾಡು ಚಿತ್ರಮಂದಿರಗಳ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಎಸ್ ಶ್ರೀಧರ್ ಹೇಳಿದ್ದಾರೆ.
ಜುಲೈ 3ರಿಂದ ಚಿತ್ರಮಂದಿರ ಬಂದ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಿನಿಮಾ ಟಿಕೆಟ್ಗಳ ಮಾರಾಟದ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ.
ಸಿನಿಮಾ ಟಿಕೆಟ್ಗಳಿಗೆ ಸಂಬಂಧಿಸಿದಂತೆ ಜಿಎಸ್ಟಿ ಎರಡು ರೀತಿ ಇರುತ್ತೆ. 100 ರು. ಒಳಗಿನ ಟಿಕೆಟ್ ಮೇಲೆ ಶೇ. 18ರಷ್ಟು, 100 ರು. ಮೇಲಿನ ಟಿಕೆಟ್ಗೆ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ.