ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಾಲಿವುಡ್ ನಟ ನಂದಮೂರಿ ತಾರಕ ರಾಮರಾವ್ ಅವರ ಜೀವನ ಚರಿತ್ರೆಯ ಸಿನಿಮಾವನ್ನು ನಿರ್ದೇಶಿಸುತ್ತಿರುವುದಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಎನ್ ಟಿ ಆರ್ ಅವರ ಜೀವನಾಧಾರಿತ ಚಿತ್ರವನ್ನು ನಿರ್ದೇಶಿಸುವುದಕ್ಕೆ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ, ಎನ್ ಟಿ ಆರ್ ಪ್ರತಿಯೊಬ್ಬ ತೆಲುಗು ಮಾತನಾಡುವ ವ್ಯಕ್ತಿಗೂ ತಿಳಿದಿರುವ ವ್ಯಕ್ತಿಯಾಗಿದ್ದಾರೆ, ಅವರು ಕೇವಲ ನಟನಷ್ಟೇ ಆಗಿರಲಿಲ್ಲ, ಆದರೆ ಅಭೂತಪೂರ್ವ ಅನುಯಾಯಿಗಳನ್ನು ಹೊಂದಿದ್ದ ನಾಯಕರಾಗಿದ್ದರು. ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರ ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ಇನ್ನಷ್ಟೇ ಹೆಸರಿಡಬೇಕಿರುವ ಚಿತ್ರದಲ್ಲಿ ಎನ್ ಟಿಆರ್ ಪಾತ್ರದಲ್ಲಿ ಅವರ ಪುತ್ರ ನಂದಮೂರಿ ಬಾಲಕೃಷ್ಣ ನಟಿಸಲಿದ್ದಾರೆ. ನಂದಮೂರಿ ತಾರಕ ರಾಮರಾವ್ ಅವರ ಅಡವಿ ರಾಮುಡು ಚಿತ್ರ ಬಿಡುಗಡೆಯಾದಾಗ, ಚಿತ್ರಮಂದಿರಕ್ಕೆ ಹೋಗಲು ನನ್ನ ಬಳಿ ಹಣವಿರಲಿಲ್ಲ, ಪ್ರತಿ ಬಾರಿಯೂ 10 ಕಿಮೀ ನಡೆದು ಹೋಗಿ 23 ಬಾರಿ ಅಡವಿ ರಾಮುಡು ಚಿತ್ರವನ್ನು ವೀಕ್ಷಿಸಿದ್ದೆ ಎಂದು ರಾಮ್ ಗೋಪಾಲ್ ವರ್ಮಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.