ಸಿನಿಮಾ ಸುದ್ದಿ

ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣ: ಕೇರಳ ಕಲಾವಿದರ ಸಂಘದಿಂದ ನಟ ದಿಲೀಪ್ ವಜಾ!

Srinivasamurthy VN

ತಿರುವನಂತಪುರಂ: ದಕ್ಷಿಣ ಭಾರತದ ಖ್ಯಾತ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ನಟ ದಿಲೀಪ್ ರನ್ನು ಕೇರಳ ಚಿತ್ರ ಕಲಾವಿದರ ಸಂಘದಿಂದ ಮಂಗಳವಾರ ವಜಾ ಮಾಡಲಾಗಿದೆ.

ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದ ಮೇರೆಗೆ ನಿನ್ನೆಯಷ್ಟೇ ನಟ ದಿಲೀಪ್ ಅವರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಇದರ ಬೆನ್ನಲ್ಲೇ ಕೇರಳ ಹಿರಿಯ ಕಲಾವಿದರು  ಹಿರಿಯ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಈ ವೇಳೆ ಕಲಾವಿದರ ಸಂಘದಿಂದ ವಜಾ ಮಾಡುವಂತೆ ಆಗ್ರಹಿಸಿದ್ದರು. ಅವರ ಮನವಿ ಮೇರೆಗೆ ಸತತ ಚರ್ಚೆ ಬಳಿಕ ನಟ ದಿಲೀಪ್ ಅವರನ್ನು ಕೇರಳ ಚಲನಚಿತ್ರ  ಕಲಾವಿದರ ಸಂಘ ಅಮ್ಮಾ (Association of Malayalam Movie Artists) ನಿಂದ ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ನಿನ್ನೆ ರಾತ್ರಿ ನಡೆದ ಭೇಟಿ ವೇಳೆ ನಟ ಮೋಹನ್ ಲಾಲ್, ನಟ ಪೃಥ್ವಿರಾಜ್ ಸೇರಿದಂತೆ ಹಲವು ಕಲಾವಿದರು ಸಭೆ ಸೇರಿ ದಿಲೀಪ್ ಅವರನ್ನು ಸಂಘದಿಂದ ವಜಾ ಮಾಡುವಂತೆ ಮನವಿ ಮಾಡಿದ್ದರು.

ನಟ ದಿಲೀಪ್ ಗೆ 14 ದಿನಗಳ ನ್ಯಾಯಾಂಗ ಬಂಧನ
ಇದೇ ವೇಳೆ ನಿನ್ನೆ ತಡರಾತ್ರಿ ವರೆಗೂ ನಟ ದಿಲೀಪ್ ರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶರು ಆರೋಪಿ ದಿಲೀಪ್ ರನ್ನು 14 ದಿನಗಳ  ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿಯಲ್ಲಿ ಚಿತ್ರೀಕರಣ ಮುಗಿಸಿ ರೂಮಿಗೆ ಆಗಮಿಸುತ್ತಿದ್ದ ನಟಿಯನ್ನು ಆಕೆಯ ಕಾರುಚಾಲಕ ಸಹಾಯದಿಂದ ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ವಿಚಾರ ವ್ಯಾಪಕ  ಸುದ್ದಿಯಾದ ಬೆನ್ನಲ್ಲೇ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

SCROLL FOR NEXT