ಚೆನ್ನೈ: ರಾಜಕೀಯ ಪ್ರವೇಶದ ಬಗ್ಗೆ ನಟ ಕಮಲ್ ಹಾಸನ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹೊತ್ತಿಸಿದೆ. ತಮಿಳು ಕವಿತೆಯ ಮೂಲಕ ಮಾಡಿರುವ ಟ್ವೀಟ್ ತೀವ್ರ ಸಂಚಲನ ಮೂಡಿಸಿದೆ.
ನಾನು ಮನಸ್ಸು ಮಾಡಿದರೇ ನಾನೇ ಮುಖ್ಯಮಂತ್ರಿ, ನಾಯಕ, ಎಂಬ ಸಾಲುಗಳು ಕಮಲ್ ಹಾಸನ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುವಂತೆ ಮಾಡಿದೆ,
ಇಲ್ಲಿ ಯಾರು ರಾಜರಲ್ಲ, ನಾವು ಅವರಂತೆ ರಾಜರಲ್ಲ, ಆದರು ಹೊಸ ಕ್ರಾಂತಿ ತರೋಣ, ಹೋರಾಡುವುದಾದರೇ ನಾನೊಬ್ಬ ಸೈನಿಕ. ನಾನು ನಿರ್ಧರಿಸಿದರೇ ನಾನೇ ಮುಖ್ಯಮಂತ್ರಿ, ತಲೆ ಬಾಗಿದ ತಕ್ಷಣ ನಾನೇನು ಗುಲಾಮನೇ? ಕಿರೀಟವಿಲ್ಲದಿದ್ದರೂ ನಾನೇನು ಎಲ್ಲಾ ಕಳೆದು ಕೊಂಡವನೇ ದಾರಿ ಹುಡುಕುವವನಿಗೆ ದಾರಿ ಕಾಣುವುದಿಲ್ಲ, ನನ್ನ ಜೊತೆ ಬನ್ನಿ ಸ್ನೇಹಿತರೇ, ಮತಾಂಧತೆ ಮೂಢ ನಂಬಿಕೆ ಪ್ರಯತ್ನಗಳನ್ನು ತಡೆಯೋಣ ಎಂದು ಮಂಗಳವಾರ ರಾತ್ರಿ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ಕೆಲ ರಾಜಕಾರಣಿಗಳ ವಿರುದ್ಧ ಕಮಲ್ ಹಾಸನ್ ಭ್ರಷ್ಟಾಚಾರ ಆರೋಪ ಮಾಡಿದ್ದರು, ಜೊತೆಗೆ ತಮಿಳು ಬಿಗ್ ಬಾಸ್ ಸ್ಪರ್ಧಿಗಳ ವಿರುದ್ಧವೂ ಕಮಲ್ ಹಾಸನ್ ಹರಿಹಾಯ್ದಿದ್ದರು, ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಸರ್ಕಾರದ ಸಚಿವರೊಬ್ಬರು ತಾಕತ್ತಿದ್ದರೇ ಕಮಲ್ ಹಾಸನ್ ರಾಜಕೀಯ ಪ್ರವೇಶಿಸಲಿ ಎಂದು ಸವಾಲು ಹಾಕಿದ್ದರು.