ಅರ್ಜುನ್ ಸರ್ಜಾ ಅವರ 150 ನೇ ಸಿನಿಮಾದಲ್ಲಿ ಜಯರಾಮ್ ಕಾರ್ತಿಕ್ ನಟನೆಯ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಆದರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗುವವರೆಗೂ ಪಾತ್ರದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸದಂತೆ ಜಯರಾಂ ಕಾರ್ತಿಕ್ ಮೇಲೆ ಒತ್ತಡವಿತ್ತು.
ವಿಸ್ಮಯ ಸಿನಿಮಾದಲ್ಲಿ ಜಯರಾಮ್ ಕಾರ್ತಿಕ್ ಅರ್ಜುನ್ ಸರ್ಜಾ ಎದುರಾಳಿ ಅಂದರೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. "ವಿಸ್ಮಯ ದೊಡ್ಡ ಯೋಜನೆಯಾಗಿತ್ತು, ನಾನು ಆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಎಲ್ಲರಿಗೂ ಹೇಳಬೇಕೆಂದುಕೊಂಡಿದ್ದೆ, ಆದರೆ ಸಿನಿಮಾದ ನಿರ್ಮಾಪಕರು, ಮಾಹಿತಿಯನ್ನು ಬಹಿರಂಗಪಡಿಸದಂತೆ ಸೂಚಿಸಿದ್ದರು. ನಾನು ವಿಸ್ಮಯದಲ್ಲಿ ನಟಿಸಿದ್ದೇನೆ ಎಂದು ಹೇಳುವುದಕ್ಕೆ ಸಿನಿಮಾ ಬಿಡುಗಡೆಯಾಗುತ್ತಿರುವ ವಾರದ ವರೆಗೂ ಕಾಯಬೇಕಾಯಿತು ಎಂದು ಜಯರಾಮ್ ಕಾರ್ತಿಕ್ ಹೇಳಿದ್ದಾರೆ.
ವಿಸ್ಮಯ ಚಿತ್ರ ತೆಲುಗಿನಲ್ಲೂ ಡಬ್ ಆಗಿದ್ದು, ಕುರುಕ್ಷೇತ್ರಂ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ, ತಮಿಳಿನಲ್ಲಿ ನಟ ಕೃಷ್ಣ ನನ್ನ ಪಾತ್ರವನ್ನಿ ನಿರ್ವಹಿಸಿದ್ದಾರೆ ಎಂದು ಜೆಕೆ ತಿಳಿಸಿದ್ದಾರೆ. ಹಿರೋ ಪಾತ್ರದಲ್ಲಿಯೂ ನಟಿಸಿರುವ ಜಯರಾಮ್ ಕಾರ್ತಿಕ್, ನಾನು ನಕಾರಾತ್ಮಕ ಪಾತ್ರಗಳಲ್ಲಿಯೂ ನಟಿಸುತ್ತೇನೆ ಆದರೆ ಅಂತಹ ಪಾತ್ರಗಳು ಎಂದಿಗೂ ನೆನೆಸಿಕೊಳ್ಳುವಂತಹದ್ದಾಗಿರಬೇಕು, ವಿಸ್ಮಯದ ಪಾತ್ರ ಅಂತಹ ಸಾಲಿಗೆ ಸೇರಿದೆ ಎಂದು ಜೆಕೆ ಹೇಳಿದ್ದಾರೆ.