ಸಿನಿಮಾ ಸುದ್ದಿ

ನಿಖಿಲ್ ಕುಮಾರ್ ಚಿತ್ರದಿಂದ ಹಿಂದೆಸರಿದ ನಿರ್ದೇಶಕ ಚೇತನ್, ಕಾರಣ ಏನು ಗೊತ್ತಾ?

Srinivas Rao BV
ನಿಖಿಲ್ ಕುಮಾರ್ ನ ಮುಂದಿನ ಚಿತ್ರ ಈ ಹಿಂದೆ ಯೋಜಿಸಲಾಗಿದ್ದಂತೆ ಆಗುವ ಸಾಧ್ಯತೆಗಳು ಕಡಿಮೆ ಇವೆ. ನಿಖಿಲ್ ಅವರ ಮುಂದಿನ ಚಿತ್ರದ ಚಿತ್ರೀಕರಣ ಜೂ.4 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಚಿತ್ರೀಕರಣ ಇನ್ನೂ ಪ್ರಾರಂಭವಾಗದೇ ಇರುವುದಕ್ಕೆ ಚಿತ್ರತಂಡ ಮಳೆಯ ಕಾರಣ ನೀಡಿದೆ. ಮಳೆ ಬಂದರೆ ಹೊರಾಂಗಣ ಸೆಟ್ ಗಳು ಹಾಳಾಗಲಿವೆ ಆದ್ದರಿಂದ ಚಿತ್ರೀಕರಣ ಪ್ರಾರಂಭವಾಗಿಲ್ಲ ಎನ್ನುತಿದೆ. 
ಆದರೆ ಗಾಂಧಿನಗರದಲ್ಲಿ ಬೇರೆಯದ್ದೇ ಕತೆ ಕೇಳಿಬರುತ್ತಿದ್ದು, ನಿಖಿಲ್ ಚಿತ್ರವನ್ನು ನಿರ್ದೇಶಿಸಬೇಕಿದ್ದ ಚೇತನ್ ಹಿಂದೆಸರಿದಿರುವುದು ಚಿತ್ರೀಕರಣ ಪ್ರಾರಂಭವಾಗಿಲ್ಲ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣವೂ ಇದ್ದು, ನಿರ್ದೇಶಕ ಚೇತನ್ ಈಗಾಗಲೇ ಒಪ್ಪಿಕೊಂಡಿರುವ ಭರ್ಜರಿ ಚಿತ್ರವನ್ನು ಇನ್ನಷ್ಟೇ ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಚಿತ್ರದಿಂದ ಹಿಂದೆಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. 
ನಿಖಿಲ್ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿರುವ ಚೇತನ್ ಭರ್ಜರಿ ಚಿತ್ರವನ್ನು ಇನ್ನೂ ಪೂರ್ಣಗೊಳಿಸಿಲ್ಲ, ಆ ಚಿತ್ರ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲೇ ಇದೆ. ಇದೇ ವೇಳೆಯಲ್ಲಿ ನಿಖಿಲ್ ಚಿತ್ರವನ್ನೂ ನಿರ್ದೇಶಿಸಿದರೆ ಎರಡೂ ಚಿತ್ರಗಳಿಗೆ ನ್ಯಾಯ ಒದಗಿಸುವುದು ಕಷ್ಟ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಚೇತನ್ ಈಗಾಗಲೇ ಪ್ರಾರಂಭಿಸಿರುವ ಭರ್ಜರಿ ಚಿತ್ರವನ್ನು ಪೂರ್ಣಗೊಳಿಸಲಿದ್ದಾರೆ. ನಂತರ ಮುಂದಿನ ಚಿತ್ರವನ್ನು ಕೈಗೆತ್ತಿಕೊಳ್ಳಲ್ಪಿದ್ದಾರೆ. ಜುಲೈ ವೇಳೆಗೆ ಭರ್ಜರಿ ಚಿತ್ರ ಪೂರ್ಣಗೊಳ್ಳಲಿದೆ. ಆದರೆ ಅಲ್ಲಿಯವರೆಗೂ ನಿಖಿಲ್ ಚಿತ್ರದ ಚಿತ್ರೀಕರಣವನ್ನು ತಡೆಹಿಡಿಯಲು ಸಾಧ್ಯವಿಲ್ಲವಾದ್ದರಿಂದ ಚಿತ್ರತಂಡ ಈಗ ಹೊಸ ನಿರ್ದೇಶಕರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಚಿತ್ರತಂಡದ ಮೂಲಗಳಿಂದ ತಿಳಿದುಬಂದಿದೆ. ನಿಖಿಲ್ ಚಿತ್ರ, ನಿರ್ದೇಶಕ ಹಾಗೂ ಚಿತ್ರೀಕರಣದ ಬಗ್ಗೆ ಪ್ರೊಡಕ್ಷನ್ ಹೌಸ್ ಜೂ.5 ರಂದು ನಿರ್ಧಾರ ಕೈಗೊಳ್ಳಲಿದೆ.
SCROLL FOR NEXT