'ದ ವಿಲನ್' ಸಿನೆಮಾದ ಪೋಸ್ಟರ್
ಬೆಂಗಳೂರು: ಲಂಡನ್ ನಲ್ಲಿ ನಡೆದ ಭಯೋತ್ಪಾದಕ ದಾಳಿ, ಕನ್ನಡ ಸಿನೆಮಾ 'ದ ವಿಲನ್'ನ ಚಿತ್ರೀಕರಣ ಯೋಜನೆಯನ್ನು ಏರುಪೇರು ಮಾಡಿದೆ. ಈಗ ಚಿತ್ರೀಕರಣದ ತಾಣವನ್ನು ನಿರ್ದೇಶಕ ಪ್ರೇಮ್ ಕೊನೆಯ ಘಳಿಗೆಯಲ್ಲಿ ಬದಲಿಸಿದ್ದಾರೆ. ಜೂನ್ ೯ ರಿಂದ ಲಂಡನ್ ನಲ್ಲಿ ಚಿತ್ರೀಕರಣ ನಡೆಸುವುದಕ್ಕಾಗಿ, ಚಿತ್ರತಂಡ ಇಂದು ಹೊರಡಬೇಕಿತ್ತು ಆದರೆ ಜೂನ್ ೩ ರಂದು ನಡೆದ ಭಯೋತ್ಪಾದಕ ದಾಳಿಯಿಂದ ಈಗ ಯೋಜನೆ ಬದಲಾಗಿದೆ.
ಈಗ ಚಿತ್ರತಂಡ ಬ್ಯಾಂಕಾಕ್ ಗೆ ತೆರಳಲು ಸಿದ್ಧವಾಗಿದ್ದು, ನಂತರ ಲಂಡನ್ ಪ್ರವಾಸ ಬೆಳೆಸಲಿದೆಯಂತೆ.
"ಚಿತ್ರತಂಡ ಹೊರಡುವುದಕ್ಕೂ ಎರಡು ದಿನ ಮುಂಚಿತವಾಗಿ ನಾವು ಅಲ್ಲಿಗೆ ತಲುಪಿ ಅಲ್ಲಿ ಚಿತ್ರೀಕರಣಕ್ಕೆ ತಾಣಗಳು ಮತ್ತು ಕೆಲವು ನಟರನ್ನು ಹುಡುಕಬೇಕಿತ್ತು. ಆದರೆ ಬಕಿಂಗ್ ಹ್ಯಾಮ್ ಪ್ಯಾಲೆಸ್, ಟ್ರಫಾಲ್ಗರ್ ಸ್ಕ್ವೇರ್ ಮತ್ತು ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಚಿತ್ರೀಕರಣ ಸಾಧ್ಯವಿಲ್ಲ ಎಂದು ನನಗೆ ತಿಳಿಸಿದರು. ಈ ಮೂರು ತಾಣಗಳಲ್ಲಿ ಸೇತುವೆ ನಮ್ಮ ಕಥೆಗೆ ಬಹು ಮುಖ್ಯ. ಇದಕ್ಕಾಗಿ ಜೂನ್ ೯ ರಿಂದ ಚಿತ್ರೀಕರಣ ನಡೆಸಲು ಪರವಾನಗಿ ಕೂಡ ಪಡೆದಿದ್ದೆ" ಎನ್ನುತ್ತಾರೆ ನಿರ್ದೇಶಕ ಪ್ರೇಮ್.
ಈಗ ಮೂರು ವಾರಗಳ ಕಾಲ ಕಾಯಲು ಮುಂದಾಗಿದ್ದಾರೆ ನಟ. "ಈ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿದೆ ಎಂದು ನಮ್ಮ ಸಂಚಾಲಕ ತಿಳಿಸಿದ್ದಾರೆ. ಆದುದರಿಂದ ಮೂರು ವಾರಗಳ ಕಾಯಲು ನಮಗೆ ತಿಳಿಸಿದ್ದಾರೆ" ಎನ್ನುವ ಪ್ರೇಮ್ ಈ ಸಮಯದಲ್ಲಿ ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ನಡೆಸಲು ಮುಂದಾಗಿದ್ದಾರೆ.
'ದ ವಿಲನ್' ಸಿನೆಮಾಗೆ ಮೊದಲ ಬಾರಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಬೆಳ್ಳಿ ತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮಿ ಜಾಕ್ಸನ್ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಶ್ರುತಿ ಹರಿಹರನ್ ಕೂಡ ಸಿನೆಮಾದ ಭಾಗವಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos