ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿ ಯಶಸ್ವಿ ನಾಯಕನಟಿ, ದಕ್ಷಿಣ ಭಾರತದ ಇತರ ಚಿತ್ರರಂಗಗಳಲ್ಲಿ ಅವಕಾಶ ಪಡೆಯುವುದು ಇತ್ತೀಚಿಗೆ ಖಚಿತವಾಗಿಬಿಟ್ಟಿದೆ. ಈಗ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವವವರು ನಟಿ ರಶ್ಮಿಕಾ ಮಂದಣ್ಣ. ಈ ವರ್ಷ ಅವರು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 'ಕಿರಿಕ್ ಪಾರ್ಟಿ'ಯ ಅಭೂತಪೂರ್ವ ಯಶಸ್ಸಿನ ನಂತರ ರಶ್ಮಿಕಾ ಕನ್ನಡ ಚಿತ್ರರಂಗದ ಅತಿ ಹೆಚ್ಚು ಬೇಡಿಕೆಯುಳ್ಳ ನಟಿಯಾಗಿ ಹೊರಹೊಮ್ಮಿದ್ದಾರೆ.
ಈಗ ಅವರ ಹೆಸರು ಇತರ ಪ್ರಾದೇಶಿಕ ಚಿತ್ರರಂಗಗಳಿಗೂ ಹಬ್ಬಿರುವುದು ವಿಶೇಷ. ತೆಲುಗು ಚಿತ್ರರಂಗದ ವಿವಿಧ ಜನಪ್ರಿಯ ಹೀರೋಗಳ ಜೊತೆಗೆ ನಟಿಸುವ ಮಾತುಕತೆಗಳು ಕೆಲ ಕಾಲದಿಂದ ನಡೆದಿದ್ದವು.
ನಟಿ ಈಗ ತೆಲುಗು ಪಾದಾರ್ಪಣೆಯನ್ನು ನಾಗ ಶೌರ್ಯ ಜೊತೆಗೆ ಮಾಡಲಿದ್ದಾರೆ. ಈ ಸುದ್ದಿಯನ್ನು ಧೃಢೀಕರಿಸುವ ನಟಿ "ನನಗೆ ಬೇರೆ ಭಾಷೆಗಳಿಂದ ಅವಕಾಶಗಳು ಬಂದಿವೆ ಮತ್ತು ತೆಲುಗಿನದ್ದು ಅಂತಿಮವಾಗಿದೆ. ನಾನು ಇತ್ತೀಚಿಗೆ ಓದಿದ್ದ ಸ್ಕ್ರಿಪ್ಟ್ ಗಳಲ್ಲಿ ನಾಗ ಶೌರ್ಯ ಅವರೊಂದಿಗಿನ ಯೋಜನೆ ನನ್ನ ತೆಲುಗು ಪಾದಾರ್ಪಣೆಗೆ ಸೂಕ್ತ ಎಂದೆನಿಸಿತು" ಎನ್ನುತ್ತಾರೆ.
ರಶ್ಮಿಕಾ ಸದ್ಯಕ್ಕೆ ಹರ್ಷ ನಿರ್ದೇಶನದ 'ಅಂಜನಿ ಪುತ್ರ' ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಎದುರು ನಟಿಸುತ್ತಿದ್ದಾರೆ. ಅವರ ಮುಂದಿನ ಯೋಜನೆ ಸುನಿ ನಿರ್ದೇಶನದ 'ಚಮಕ್'. ಈ ಸಿನೆಮಾದಲ್ಲಿ ಗಣೇಶ್, ರಶ್ಮಿಕಾ ಅವರೊಂದಿಗೆ ನಟಿಸಲಿದ್ದಾರೆ. "ತೆಲುಗು ಸಿನೆಮಾದ ಮುಹೂರ್ತ ಯಾವಾಗ ಬೇಕಿದ್ದರೂ ನಡೆಯಬಹುದು ಆದರೆ ನಾನು ನನ್ನ ಕನ್ನಡ ಸಿನೆಮಾಗಳ ಕೆಲಸ ಮುಗಿದ ಮೇಲಷ್ಟೇ ಆ ಸಿನೆಮಾದ ಸೆಟ್ ಸೇರಲಿದ್ದೇನೆ" ಎನ್ನುತ್ತಾರೆ ನಟಿ.
ಬೇರೆ ಭಾಷೆಗಳ ಸಿನೆಮಾಗಳಲ್ಲಿ ನಟಿಸುವ ಇಚ್ಛೆಯಿದೆಯಾದರೂ ನನ್ನ ಆದ್ಯತೆ ಕನ್ನಡ ಸಿನೆಮಾಗಳು ಎಂದು ತಿಳಿಸುವ ನಟಿ "ನಟನೆಗೆ ಯಾವುದೇ ಭಾಷೆಯ ಗಡಿಯಿಲ್ಲ ಎನ್ನುತ್ತಾರೆ. ಒಳ್ಳೆಯ ಸಿನೆಮಾಗಳಷ್ಟೇ ಇತರ ಪ್ರದೇಶಗಳಿಗೂ ಹಬ್ಬುವುದು. ನನ್ನ ಮೊದಲ ಸಿನೆಮಾಗೆ ಬಂದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಮರೆಯಲು ಸಾಧ್ಯವಿಲ್ಲ ಮತ್ತು ನನ್ನ ಆದ್ಯತೆ ಸ್ಯಾಂಡಲ್ವುಡ್ ಗೆ ಎನ್ನುತ್ತಾರೆ" ರಶ್ಮಿಕಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos