'ಚೂರಿ ಕಟ್ಟೆ' ಸಿನೆಮಾದಲ್ಲಿ ಪ್ರವೀಣ್ ಮತ್ತು ಪ್ರೇರಣ
ಬೆಂಗಳೂರು: ಪ್ರಶಸ್ತಿ ವಿಜೇತ ಕಿರುಚಿತ್ರ 'ಚೌಕಾಬಾರ' ನಿರ್ದೇಶಿಸಿ ಗಮನ ಸೆಳೆದ ರಘು ಶಿವಮೊಗ್ಗ ಈಗ ಫೀಚರ್ ಫಿಲಂ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ನೀನಾಸಂ ನಲ್ಲಿ ಕಲಿತ ರಘು, ನಿರ್ದೇಶಕ-ರಂಗಕರ್ಮಿ ಪ್ರಕಾಶ್ ಬೆಳವಾಡಿ ಮತ್ತು ಬಿ ಸುರೇಶ ಗರಡಿಯಲ್ಲಿ ಪಳಗಿದವರು. ಧಾರವಾಹಿ ಲೋಕದಲ್ಲಿಯೂ ಪಯಣಿಸಿರುವ ಈ ಯುವ ನಿರ್ದೇಶಕ ಬೆಳ್ಳಿತೆರೆಗೆ ಧುಮುಕಲು ಸಿದ್ಧರಾಗಿದ್ದಾರೆ.
'ಚೂರಿ ಕಟ್ಟೆ' ಎಂದು ಹೆಸರಿಸಿರುವ ಈ ಸಿನೆಮಾ ಥ್ರಿಲ್ಲರ್ ಆಗಿರಲಿದೆಯಂತೆ. ಇದು ಟಿಂಬರ್ ಮಾಫಿಯಾ (ಬೆಲೆ ಬಾಳುವ ಮರಗಳ ಕಳ್ಳ ಸಾಗಾಣಿಕೆ) ಮೇಲೆ ಬಳಕು ಚೆಲ್ಲಲಿದೆ ಎಂದು ವಿವರಿಸುವ ನಿರ್ದೇಶಕ "ಇದು ಕಾಲ್ಪನಿಕ ಕಥೆ ಮತ್ತು ಕಾಡು-ಮರಗಳ ನಡುವೆ ನಡೆಯಲಿದೆ. ಆದುದರಿಂದ ಜೋಗ ಜಲಪಾತದ ಹತ್ತಿರವಿರುವ ಚೂರಿ ಕಟ್ಟೆ ಎಂಬ ಜಾಗದಲ್ಲಿ ಚಿತ್ರೀಕರಿಸಲು ನಿಶ್ಚಯಿಸಿದೆ. ಅದು ತದನಂತರ ಶೀರ್ಷಿಕೆಯು ಆಯಿತು" ಎಂದು ವಿವರಿಸುತ್ತಾರೆ ರಘು.
ಈ ಸಿನೆಮಾದ ನಾಯಕನಟನಾಗಿ 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಖ್ಯಾತಿಯ ಪ್ರವೀಣ್ ಆಯ್ಕೆಯಾಗಿದ್ದು, ನೂತನ ನಟಿ ಪ್ರೇರಣ ಪಾದಾರ್ಪಣೆ ಮಾಡುತ್ತಿದ್ದಾರೆ. "ಪ್ರೇರಣ 'ಚೂರಿ ಕಟ್ಟೆ' ಮೂಲಕ ಕಿರುತೆರೆಯಿಯಿಂದ ಬೆಳ್ಳಿತೆರೆಗೆ ಬರಲಿದ್ದಾರೆ" ಎನ್ನುತ್ತಾರೆ ರಘು.
ಮಾರ್ಚ್ ೨೦ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಕರ್ನಾಟಕದಾದ್ಯಂತ ೪೫ ದಿನಗಳ ಚಿತ್ರೀಕರಣ ನಡೆಸಲು ನಿರ್ದೇಶಕ ಮುಂದಾಗಿದ್ದಾರೆ. ಮಾರ್ನಿಂಗ್ ಸ್ಟಾರ್ಸ್ ಬ್ಯಾನರ್ ಅಡಿ 'ಚೂರಿ ಕಟ್ಟೆ' ನಿರ್ಮಾಣಗೊಳ್ಳುತ್ತಿದ್ದು, ಎಸ್ ನಾಯಜ್ ಮತ್ತು ಎಂ ತುಳಸೀರಾಮುಡು ನಿರ್ಮಾಪಕರು. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ, ಪ್ರಮೋದ್ ಶೆಟ್ಟಿ ತಾರಾಗಣದ ಭಾಗವಾಗಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದು ಅದ್ವೈತ್ ಗುರುಮೂರ್ತಿ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos