ಸಿನಿಮಾ ಸುದ್ದಿ

ನಟ ಕಲಾಭವನ್ ಮಣಿ ನಿಗೂಢ ಸಾವು ಪ್ರಕರಣ ತನಿಖೆಗೆ ಸಿಬಿಐ ರೆಡಿ

Vishwanath S
ಕೊಚ್ಚಿ: ನಟ ಕಲಾಭವನ್ ಮಣಿ ನಿಗೂಢ ಸಾವು ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಕೇರಳ ಹೈ ಕೋರ್ಟ್ ಈ ಹಿಂದೆ ಆದೇಶಿಸಿದ್ದು ಇದರ ಅನ್ವಯ ತನಿಖೆ ನಡೆಸಲು ಸಿಬಿಐ ತೀರ್ಮಾನಿಸಿದೆ. 
ಪ್ರಕರಣದ ತನಿಖೆ ನಡೆಸುತ್ತಿದ್ದ ಚಾಲಕುಡಿ ಸರ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಅವರು ತನಿಖೆಯ ವಿವರವನ್ನು ಸಿಬಿಐ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. 
ಕಲಾಭವನ್ ಮಣಿ ಅನುಮಾನಾಸ್ಪದ ಸಾವು ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ತಿಂಗಳೊಳಗಾಗಿ ಸಿಬಿಐ ತನಿಖೆ ಕೈಗೊಳ್ಳುವಂತೆ ಸೂಚನೆ ನೀಡಿತ್ತು. 
ಕಲಾಭವನ್ ಅವರು ಮಲಯಾಳಂನ ಪ್ರತಿಭಾವಂತ ಕಲಾವಿದರಾಗಿದ್ದು, ತಮಿಳು, ಕನ್ನಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. 2016ರ ಮಾರ್ಚ್ 6 ರಂದು ಕಲಾಭವನ್ ಮಣಿಯವರು ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದವು. 
ಪತಿಯ ಸಾವಿನ ಹಿಂದೆ ಸಾಕಷ್ಟು ನಿಗೂಢತೆಗಳಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಕೋರಿ ಕಲಾಭವನ್ ಮಣಿಯವರ ಪತ್ನಿ ಹಾಗೂ ಸಹೋದರ ಆರ್'ಎಲ್'ವಿ ರಾಮಕೃಷ್ಣನ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
SCROLL FOR NEXT