ಬೆಂಗಳೂರು: ಸುದೀಪ್ ನಟನೆಯ 'ಮಾಣಿಕ್ಯ' ಸಿನೆಮಾದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ರನ್ಯ ರಾವ್, ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ನಟಿ ಈಗಿನ ತಮ್ಮ ವಿರಾಮವನ್ನು ವಿನಿಯೋಗಿಸಿಕೊಳ್ಳುತ್ತಿದ್ದಾರಂತೆ.
'ಪಟಾಕಿ' ಸಿನೆಮಾ ಬಿಡುಗಡೆ ಸನಿಹವಾಗುತ್ತಿರುವ ಸಮಯದಲ್ಲಿ ಮಾತಿಗೆ ಸಿಕ್ಕ ನಟಿ "'ಪಟಾಕಿ' ಸಿನೆಮಾದೊಂದಿಗೆ ನಾನು ಕೇವಲ ಮೂರೂ ಸಿನೆಮಾಗಳಲ್ಲಿ ನಟಿಸಿದಂತಾಯಿತು. ಕೆಲಸದ ವಿಷಯದಲ್ಲಿ ಹಲವು ಸಂಗತಿಗಳು ಇದ್ದರೂ ಸದ್ಯಕ್ಕೆ ಅವುಗಳ ಬಗ್ಗೆ ಹೇಳಲು ಸಾಧ್ಯವಿಲ್ಲ" ಎನ್ನುತ್ತಾರೆ ರನ್ಯ.
"ನನ್ನ ಪ್ಯಾಷನ್ ಇನ್ನು ಜೀವಂತವಾಗಿದೆ ಮತ್ತು ನನ್ನ ಗುರಿ ಇನ್ನು ಗಟ್ಟಿಯಾಗಿದೆ. ನಾನು ಇನ್ನು ಉತ್ತಮ ನಟಿಯಾಗಬೇಕು ಅಷ್ಟೆ" ಎನ್ನುವ ರನ್ಯ, ನಾನು ಸಿನೆಮಾ ರಂಗದಲ್ಲಿ ಇರುವುದು ಅತಿ ಹೆಚ್ಚು ಸಿನೆಮಾಗಳಲ್ಲಿ ನಟಿಸಬೇಕು ಎಂಬ ಆಸೆಯಿಂದಲ್ಲ ಎನ್ನುತ್ತಾರೆ. ಭಾಷೆ ಕೂಡ ನನಗೆ ತಡೆಯಾಗಿಲ್ಲ ಎನ್ನುವ ನಟಿ "ಕನ್ನಡ ಮತ್ತು ತಮಿಳಿನಲ್ಲಿ ಪಾದಾರ್ಪಣೆ ಮಾಡಲು ಎರಡು ಒಳ್ಳೆಯ ಸಿನೆಮಾಗಳು ಸಿಕ್ಕವು. ನಾನು ನಿಧಾನವಾಗಿ ಮುಂದುವರೆಯುತ್ತಿದ್ದೇನೆ ಮತ್ತು ಸಾಕಷ್ಟು ಉತ್ತಮಗೊಳ್ಳಬೇಕಿದೆ" ಎನ್ನುತ್ತಾರೆ.
'ಪಟಾಕಿ'ಗಾಗಿ ಎರಡು ವರ್ಷಗಳ ಸಮಯ ಮೀಸಲಿಟ್ಟಿದ್ದೆ ಎನ್ನವ ನಟಿ ಈಗ ಅದರ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. "ಇದು ಸುದೀರ್ಘ ಸಮಯ ತೆಗೆದುಕೊಂಡಿತು ಆದರೆ ಸಿನೆಮಾ ಸುತ್ತ ಧನಾತ್ಮಕ ಬಜ್ ಸೃಷ್ಟಿಯಾಗುತ್ತಿರುವುದು ಖುಷಿ ತಂದಿದೆ. ಮಂಜು ಸ್ವರಾಜ್ ನಿರ್ದೇಶನದ ಮತ್ತು ಗಣೇಶ್ ನಟನೆಯ ಈ ಸಿನೆಮಾದಲ್ಲಿ ಸಂಪೂರ್ಣ ಮನರಂಜನೆ ಸಿಗಲಿದೆ. ಈ ಲಘು ಹಾಸ್ಯ ಸಿನೆಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇಲ್ಲಿ ನನಗೆ ನೃತ್ಯ ಮಾಡುವ ಅವಕಾಶವೂ ಇತ್ತು" ಎನ್ನುತ್ತಾರೆ.
ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿರುವ ನಟಿ "ನನ್ನ ಮುಂದಿನ ಸಿನೆಮಾ ಕನ್ನಡದ್ದು ಅಥವಾ ಮಲಯಾಳಂ ಭಾಷೆಯದ್ದಾಗಿರಬಹುದು. ಅಥವಾ ನಾನು ಬಾಲಿವುಡ್ ಗೆ ಕೂಡ ಪ್ರವೇಶ ಪಡೆಯಬಹುದು. ಯಾರಿಗೆ ಗೊತ್ತು! ಈಗ ಸದ್ಯಕ್ಕೆ ಏನು ಹೇಳುವಂತಿಲ್ಲ. ನಾನಿನ್ನು ಕಲಿಯುವ ಹಂತದಲ್ಲಿದ್ದೇನೆ" ಎನ್ನುತ್ತಾರೆ ರನ್ಯ.