ಬೆಂಗಳೂರು: ಹೊಸತನದ ಪ್ರಯೋಗಗಳಲ್ಲಿ ಸದಾ ತೊಡಗಿಸಿಕೊಳ್ಳಲು ಬಯಸುವ ನಟಿ ಶ್ರುತಿ ಹರಿಹರನ್ ಈಗ ನಿರ್ದೇಶಕ ಕೆ ಎಂ ಚೈತನ್ಯ ಅವರ ಸಿನೆಮಾದಲ್ಲಿ ನಟಿಸಲಿದ್ದಾರೆ.
ಇನ್ನು ಹೆಸರಿಡದ ಈ ಥ್ರಿಲ್ಲರ್ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಎದುರು ನಟಿಸಲಿದ್ದಾರೆ. ಸದ್ಯಕ್ಕೆ ಮೇ ೨೫ ರಂದು 'ತಾರಕ್' ಚಿತ್ರೀಕರಣಕ್ಕಾಗಿ ನಟಿ ವಿದೇಶಕ್ಕೆ ಹಾರುತ್ತಿದ್ದು, ನಂತರ 'ಹಂಬಲ್ ಪೊಲಿಟಿಷಿಯನ್ ನೊಗರಾಜ್'ನ ಮುಂದಿನ ಹಂತದ ಚಿತ್ರೀಕರಣಕ್ಕೆ ಹಿಂದಿರುಗಲಿದ್ದಾರೆ. ಡ್ಯಾನಿಷ್ ಸೈಟ್ ನಟನೆಯ ಈ ಸಿನೆಮಾದ ನಂತರ ಜುಲೈ ಅಂತ್ಯದಲ್ಲಿ ಪ್ರಾರಂಭವಾಗುವ ಚೈತನ್ಯ ಅವರ ಸಿನೆಮಾ ಚಿತ್ರೀಕರಣವನ್ನು ಸೇರಲಿದ್ದಾರೆ.
ಚೈತನ್ಯ ಜೊತೆಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎನ್ನುವ ನಟಿ "ನನ್ನ ಪಾತ್ರದ ಬಗ್ಗೆ ಮಾತನಾಡದಿರಲು ನನಗೆ ಸೂಚಿಸಲಾಗಿದೆ. ನಿರ್ದೇಶಕರೇ ಅಂತ್ಯಕ್ಕೆ ಎಲ್ಲವನ್ನು ತಿಳಿಸಲಿದ್ದಾರೆ.. ಆದರೆ ಈ ಪಾತ್ರ ನನಗೆ ವೀಭಿನ್ನ ಎಂದಷ್ಟೇ ಹೇಳುವೆ" ಎನ್ನುತ್ತಾರೆ.
ಕ್ರೈಸ್ಟ್ ಕಾಲೇಜಿನಲ್ಲಿ ಚೈತನ್ಯ ನನಗೆ ಹಿರಿಯ ವಿದ್ಯಾರ್ಥಿಯಾಗಿದ್ದರು ಎಂದು ತಿಳಿಸುವ ಶ್ರುತಿ ಕೆಲವು ವರ್ಷಗಳಿಂದ ಅವರ ಕೆಲಸಗಳನ್ನು ಅನುಸರಿಸುತ್ತಿರುವುದಾಗಿ ತಿಳಿಸುತ್ತಾರೆ. 'ಆ ದಿನಗಳು', 'ಆಟಗಾರ' ಸಿನೆಮಾಗಳ ನಿರ್ದೇಶಕ ಮಾಮೂಲಿತನ ಮುರಿಯುತ್ತಾರೆ ಎನ್ನುವ ಅವರು "ನನಗೆ ಅವರ ಬಗ್ಗೆ ಈ ವಿಷಯ ಇಷ್ಟ. ಇತರ ಸಿನೆಮಾಗಳಿಂದ ಸ್ಫೂರ್ತಿ ಪಡೆದಿದ್ದರೂ, ಅವರು ಆಯ್ಕೆ ಮಾಡಿಕೊಳ್ಳುವ ವಿಷಯ ಮತ್ತು ಅವುಗಳಿಗೆ ತಮ್ಮದೇ ರೀತಿಯಲ್ಲಿ ಜೀವ ತುಂಬವ ರೀತಿ ನನಗೆ ಬಹಳ ಇಷ್ಟ. ಅದಕ್ಕೆ ಅತ್ಯುತ್ತಮ ಉದಾಹರಣೆ ಅವರ ಹಿಂದಿನ ಸಿನೆಮಾ 'ಆಟಗಾರ'" ಎನ್ನುತ್ತಾರೆ.
ಶ್ರುತಿ ಸದ್ಯಕ್ಕೆ ಅರ್ಜುನ್ ಸರ್ಜಾ ಜೊತೆಗೆ ನಟಿಸಿರುವ 'ವಿಸ್ಮಯ' ಸಿನೆಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇದು ತಮಿಳಿನಲ್ಲಿ 'ನಿಬುಣನ್' ಎಂದು ಬಿಡುಗಡೆಯಾಗುತ್ತಿದೆ. "'ದ ಲಾಸ್ಟ್ ಕನ್ನಡಿಗ'-ನನ್ನ ನಿರ್ಮಾಣದ ಮೊದಲ ಚಲನಚಿತ್ರ ಇನ್ನೇನು ಸಂಪೂರ್ಣಗೊಳ್ಳುತ್ತಿದೆ. ಜೂನ್ ಮಧ್ಯದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ" ಎನ್ನುತ್ತಾರೆ. ಚಿತ್ರೀಕರಣ ನಂತರದ ಕಾರ್ಯಗಳಲ್ಲಿ ನಿರತನಾಗಿರುವ 'ಉಪೇಂದ್ರ ಮತ್ತೆ ಹುಟ್ಟಿ ಬಾ -ಇಂತಿ ಪ್ರೇಮ' ಸಿನಿಮಾದಲ್ಲಿಯೂ ಶ್ರುತಿ ನಟಿಸಿದ್ದಾರೆ.