ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ವಿವಿಧ ಬಣ್ಣಗಳಲ್ಲಿ ಮಿಂದು ಮೇಲೇಳುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. 'ಕಿರಿಕ್ ಪಾರ್ಟಿ' ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ ರೂಪದರ್ಶಿ ರಶ್ಮಿಕಾ ಚಿತ್ರರಂಗದ ಗಮನ ಸೆಳೆದು ಹಲವು ಅವಕಾಶಗಳಿಗೆ ಭಾಜನರಾದವರು. ರಕ್ಷಿತ್ ಶೆಟ್ಟಿ ಜೊತೆಗೆ ನಟಿಸಿದ್ದ ಅನನ್ಯ ಟೀಚರ್ ಪಾತ್ರ ಮನೆಮಾತಾಗಿತ್ತು.
ಮೊದಲ ಸಿನೆಮಾದ ಯಶಸ್ಸಿನ ನಂತರ ಕನ್ನಡದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದ ರಶ್ಮಿಕಾರಿಗೆ, ತೆಲುಗು ಮತ್ತು ತಮಿಳು ಚಿತ್ರರಂಗಗಳಿಂದಲೂ ಕರೆ ಬಂದಿತ್ತು. ತೆಲುಗಿನ ಜನಪ್ರಿಯ ನಟರಾದ ಪ್ರಭಾಸ್, ಅಲ್ಲು ಅರ್ಜುನ್ ಮತ್ತು ನಾಣಿ ಎದುರು ನಟಿಸಲು ಬೇಡಿಕೆ ಬಂದಿತ್ತು.
ಈಗ ತೆಲುಗು ಪಾದಾರ್ಪಣೆಗೆ ನಾಗ ಶೌರ್ಯ ಸಿನೆಮಾವನ್ನು ನಟಿ ಆಯ್ಕೆ ಮಾಡಿಕೊಂಡಿದ್ದು, ಸದ್ಯಕ್ಕೆ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದರ ನಂತರ ಕಿಶೋರ್ ತಿರುಮಲ ನಿರ್ದೇಶನದ ಮತ್ತೊಂದು ತೆಲುಗು ಸಿನೆಮಾದಲ್ಲಿ ನಟ ರಾಮ್ ಎದುರು ನಟಿಸಲಿದ್ದಾರೆ. ಪ್ರಭಾಸ್ ಅವರ ಮುಂದಿನ ಚಿತ್ರ 'ಸಾಹೋ'ದಲ್ಲಿ ನಾಯಕನಟಿಯಾಗಿ ಕಾಣಿಸಿಕೊಳ್ಳಲು ಅವಕಾಶ ಸಿಕ್ಕಿದ್ದರೂ, ದಿನಾಂಕ ಹೊಂದಿಕೆಯಾಗದ ಕಾರಣ ಅದನ್ನು ನಿರಾಕರಿಸಿದ್ದಾರೆ. ಕನ್ನಡದಲ್ಲಿ ಗಣೇಶ್ ಅವರ 'ಚಮಕ್' ನಲ್ಲಿಯೂ ಎ ಹರ್ಷ ನಿರ್ದೇಶನದ ಪುನೀತ್ ರಾಜಕುಮಾರ್ ನಾಯಕನಟನಾಗಿರುವ 'ಅಂಜನೀಪುತ್ರ'ದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ.
ನಟನೆ ಸದಾ ನನ್ನ ಮನಸ್ಸಿನಲ್ಲಿತ್ತು ಎನ್ನುವ ರಶ್ಮಿಕಾ ಪರಭಾಷೆಯ ಸಿನೆಮಾದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ಆ ಭಾಷೆ ಕಲಿಯುವುದಾಗಿ ತಿಳಿಸಿಯುತ್ತಾರೆ. ಇತರ ಭಾಷೆಯ ಸಿನೆಮಾ ರಂಗದಿಂದ ಸಾಕಷ್ಟು ಅವಕಾಶಗಳು ಒದಗಿ ಬರುತ್ತಿದ್ದರೂ ಕನ್ನಡ ತಮ್ಮ ಮೊದಲ ಆದ್ಯತೆ ಎನ್ನುವ ನಟಿ "ಸ್ಯಾಂಡಲ್ ವುಡ್ ನ ನನ್ನ ಮೊದಲ ಸಿನೆಮಾಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯನ್ನು ನಾನೆಂದಿಗೂ ಮರೆಯುವುದಿಲ್ಲ. ಸಿನೆಮಾಗೆ ಭಾಷೆಯ ಅಡೆತಡೆ ಇರುವುದಿಲ್ಲ. ಇತರ ಭಾಷೆಯ ಸಿನೆಮಾಗಳು ರಿಮೇಕ್ ಆಗುತ್ತವೆ. ನಾನು ಎಲ್ಲ ಭಾಷೆಗಳಲ್ಲೂ ಒಳ್ಳೆಯ ಸಿನೆಮಾಗಳನ್ನು ಮಾಡಲು ಪ್ರಯತ್ನಿಸುತ್ತೇನೆ" ಎನ್ನುತ್ತಾರೆ.
ಶಿಕ್ಷಣದಲ್ಲಿಯೂ ಮುಂದಿರುವ ನಟಿ ಸದ್ಯಕ್ಕೆ ಬಿ ಎ ಪತ್ರಿಕೋದ್ಯಮದ ಅಂತಿಮ ಪರೀಕ್ಷೆ ಬರೆದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸಹಾಯ ಮಾಡುತ್ತಿರುವ ತಾಯಿಯನ್ನು ನೆನೆಯುವ ವಿರಾಜಪೇಟೆ ಬೆಡಗಿ "ಅವರು ನನ್ನೆಲ್ಲ ಶ್ರಮವನ್ನು ನಟನೆಗೆ ತೊಡಗಿಸುವುದಕ್ಕೆ ಸಹಾಯ ಮಾಡುತ್ತಿದ್ದಾರೆ. ನನ್ನ ಅಂಕಪಟ್ಟಿಯನ್ನು ತೋರಿಸಿ ನಟನೆಯ ಹೊರತಾಗಿಯೂ ನಾನು ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು" ಎಂದು ನಗುತ್ತ ಹೇಳುತ್ತಾರೆ ರಶ್ಮಿಕಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos