ಸಿನಿಮಾ ಸುದ್ದಿ

ಮುಸ್ಸಂಜೆ ಮಹೇಶ್ ಅವರ ಭರ್ಜರಿ ಸಿನೆಮಾಯಾನ

Guruprasad Narayana
ಬೆಂಗಳೂರು: ಸುದೀಪ್ ಮತ್ತು ರಮ್ಯಾ ನಟಿಸಿದ್ದ 'ಮುಸ್ಸಂಜೆ ಮಾತು' ಸಿನೆಮಾ ಖ್ಯಾತಿಯ ನಿರ್ದೇಶಕ ಮುಸ್ಸಂಜೆ ಮಹೇಶ್, ಕೈತುಂಬಾ ಕೆಲಸವನ್ನಿಟ್ಟುಕೊಂಡು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಆದಿತ್ಯ ಮತ್ತು ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿರುವ 'ನಾನೇ ನೆಕ್ಸ್ಟ್ ಸಿ ಎಂ' ಮತ್ತು ಮೇಘನಾ ರಾಜ್ ನಟಿಸಿರುವ 'ಜಿಂದಾ' ಬಿಡುಗಡೆಗೆ ಸಿದ್ಧವಾಗಿದ್ದರೆ, ಮತ್ತೆರಡು ಯೋಜನೆಗಳಿಗೆ ಚಾಲನೆ ನೀಡಲು ನಿರ್ದೇಶಕ ಸಿದ್ಧರಾಗಿದ್ದಾರೆ. 
"ಸೋಮಾರಿ ಮನಸ್ಸಿನಲ್ಲಿ ಭೂತ ನರ್ತನ ಮಾಡುತ್ತದೆ ಎಂಬ ಇಂಗ್ಲಿಷ್ ನಾಣ್ಣುಡಿಯಿದೆ. ಆದರೆ ನನ್ನ ಸೋಮಾರಿತನ, ನನಗೆ ಕಾಗದ ಮತ್ತು ಪೆನ್ನು ಹಿಡಿದು ಕೂರುವಂತೆ ಮಾಡುತ್ತದೆ. ನಾನು ನಿರ್ದೇಶನ ಮಾಡದೆ ಇರುವಾಗ ಕಥೆಗಳನ್ನು ಬರೆದು ಸಂಗ್ರಹಿಸುತ್ತೇನೆ. ಅದು ಮುಂದೊಂದು ದಿನ ನನ್ನ ಸಹಾಯಕ್ಕೆ ಬರುವುದಲ್ಲದೆ ಅದನ್ನು ನಿರ್ದೇಶಿಸುವ ಭರವಸೆಯು ಇರುತ್ತದೆ. ನನ್ನ ಮುಂದಿನ ಎರಡು ಸಿನೆಮಾಗಳು ನನ್ನ ಕಥಾ ಕಣಜದಿಂದಲೇ ಪ್ರಾರಂಭವಾಗುತ್ತಿವೆ" ಎನ್ನುತ್ತಾರೆ ಮಹೇಶ್. 
ಅವರ ಹೊಸ ಸಿನೆಮಾದ ಮುಹೂರ್ತ ರಾಗಿಣಿ ಅವರ ಹುಟ್ಟುಹಬ್ಬದ ಮತ್ತು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ಅವರ ಮದುವೆ ವಾರ್ಷಿಕೋತ್ಸವ ದಿನಂದಂದೇ ನೆರವೇರುತ್ತಿರುವುದು ಕಾಕತಾಳೀಯವಂತೆ. ಬಚ್ಚೇಗೌಡ ಅವರು ಮಹೇಶ್ ಅವರ ಮುಂದಿನ ಎರಡೂ ಸಿನೆಮಾಗಳ ನಿರ್ಮಾಪಕರು. 
ರಾಗಿಣಿ ಅವರೊಂದಿಗೆ ಎರಡನೇ ಬಾರಿಗೆ ಮಹೇಶ್ ಕೆಲಸ ಮಾಡುತ್ತಿದ್ದರೆ, ಆದಿತ್ಯ ಅವರೊಂದಿಗೆ ಮೂರನೇ ಬಾರಿ ಕೈಜೋಡಿಸಿದ್ದಾರೆ. "ನಾನು ಈ ಹಿಂದೆ ಪ್ರಯತ್ನಿಸದ ಪಾತ್ರಗಳನ್ನು ರಾಗಿಣಿ ಮತ್ತು ಆದಿತ್ಯ ಪೋಷಿಸಲಿದ್ದಾರೆ. ಆದಿತ್ಯ ಹೀರೊ ಇಮೇಜ್ ಕಳೆದುಕೊಂಡು ಸಾಮಾನ್ಯ ಮನುಷ್ಯನ ಅವತಾರದಲ್ಲಿ ಕಾಣಿಸಿಕೊಂಡರೆ, ರಾಗಿಣಿ ಗ್ಲಾಮರ್ ಇಲ್ಲದೆ ಪಕ್ಕದ ಮನೆಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎನ್ನುತ್ತಾರೆ. 
ಮತ್ತೊಂದು ಸಿನಿಮಾದಲ್ಲಿಯೂ ಆದಿತ್ಯ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ. "ತಂತ್ರಜ್ಞರು ಅವರೇ ಉಳಿದುಕೊಳ್ಳಲಿದ್ದು, ಉಳಿದ ತಾರಾಗಣದ ಹುಡುಕಾಟದಲ್ಲಿದ್ದೇವೆ" ಎನ್ನುತ್ತಾರೆ ಮಹೇಶ್. 
SCROLL FOR NEXT