ದುಬೈ: ಇಂದಿನ ಯುವ ಜನಾಂಗ ದೇಶದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುತ್ತಾರೆ ಎಂದು ಹಿರಿಯ ನಟ ರಜನಿಕಾಂತ್ ಶ್ಲಾಘಿಸಿದ್ದಾರೆ. ಆದರೆ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳಿಂದ ಯುವ ಜನಾಂಗ ದೂರವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ದುಬೈಯಲ್ಲಿ ತಮ್ಮ ಮುಂಬರುವ ಚಿತ್ರ 2.0ದ ಹಾಡುಗಳನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿ, ಜೀವನದಲ್ಲಿ ಖುಷಿಯಾಗಿರಬೇಕಾದರೆ ತಮ್ಮ ಹುಟ್ಟೂರಿನ ಜೊತೆ ಸಂಪರ್ಕ ಹೊಂದಿರಬೇಕು ಎಂದು ಹೇಳಿದರು.
ಇಂದಿನ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯನ್ನು ಪ್ರೀತಿಸುತ್ತಾರೆ. ಯುವ ಜನಾಂಗದ ಈ ನಡೆಯನ್ನು ನಾನು ಇಷ್ಟಪಡುತ್ತೇನೆ. ಆದರೆ ಯುವಜನರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ವಿಮುಖರಾಗುತ್ತಿದ್ದಾರೆ. ನೀವು ಸಂತೋಷಯುತ ಜೀವನ ನಡೆಸಬೇಕೆಂದರೆ ನಿಮ್ಮ ಹುಟ್ಟೂರನ್ನು,ಹಿನ್ನೆಲೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಮಗೆ ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶಗಳು ಸಿಗುವುದು ಕಷ್ಟ. ಸಿಕ್ಕಿದಾಗ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಅದಕ್ಕಿಂತ ದೊಡ್ಡ ಮೂರ್ಖತನವಿಲ್ಲ ಎಂದು ಹೇಳಿದರು.
ಯಾರಾದರೂ ಜೀವನದಲ್ಲಿ ಹೆಸರು ಖ್ಯಾತಿ ಗಳಿಸಿದ್ದಾರೆಂದಾದರೆ ಅವರು ಕಠಿಣ ಶ್ರಮ ಹಾಕಿದ್ದಾರೆಂದರ್ಥವಲ್ಲ, ಸಿಕ್ಕಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ದಾರೆ ಎಂದು ಎಂದರು.
ಶಂಕರ್ ನಿರ್ದೇಶನದ 2.0 ಚಿತ್ರದಲ್ಲಿ ರಜನಿಕಾಂತ್ ರೊಬೊಟ್ ಚಿಟ್ಟಿಯಾಗಿ ಮತ್ತು ವಿಜ್ಞಾನಿ ಡಾ. ವಸೀಗರನ್ ಪಾತ್ರವನ್ನು ಅಭಿನಯಿಸಿದ್ದಾರೆ. ಚಿತ್ರವನ್ನು ಲಿಕಾ ಪ್ರೊಡಕ್ಷನ್ ತಯಾರಿಸಿದೆ. ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಆಮಿ ಜಾಕ್ಸನ್ ಮತ್ತು ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. 2.0 ಚಿತ್ರ ಮುಂದಿನ ವರ್ಷ 25ರಂದು ಬಿಡುಗಡೆಯಾಗಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos