ಹೈದರಾಬಾದ್: ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಪ್ರಮಾಣದ ಗಳಿಕೆ ಕಂಡ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ ಬಳಿಕ ಕೊಂಚ ಬ್ರೇಕ್ ಪಡೆದಿದ್ದ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತೆ ಅ್ಯಕ್ಷನ್ ಕಟ್ ಹೇಳಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಟಾಲಿವುಡ್ ಮೂಲಗಳ ಪ್ರಕಾರ ಬಾಹುಬಲಿ ಬಳಿಕ ಮತ್ತೊಂದು ವಿಭಿನ್ನ ಕಥೆಯನ್ನು ರಾಜಮೌಳಿ ಸಿದ್ಧಪಡಿಸುತ್ತಿದ್ದು, ಈ ಚಿತ್ರವೂ ಕೂಡ ಬಾಹುಬಲಿಯಂತೆ ಬಿಗ್ ಬಜೆಟ್ ಚಿತ್ರವಾಗಿರಲಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಈ ದೊಡ್ಡ ಚಿತ್ರದ ನಾಯಕನಾಗಿ ಮಗಧೀರ ಖ್ಯಾತಿಯ ರಾಮ್ ಚರಣ್ ತೇಜ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಹಿಂದಿನ ಗಾಸಿಪ್ ಗಳಂತೆ ರಾಜಮೌಳಿ ಅವರ ಮುಂದಿನ ಚಿತ್ರಕ್ಕೆ ಜೂನಿಯರ್ ಎನ್ ಟಿಆರ್ ಹಾಗೂ ಅಲ್ಲು ಅರ್ಜುನ್ ನಾಯಕರಾಗುವ ಸಾಧ್ಯತೆ ಇದೆ ಹೇಳಲಾಗಿತ್ತಾದರೂ, ಪ್ರಸ್ತುತ ಈ ಇಬ್ಬರೂ ನಾಯಕರ ಡೇಟ್ಸ್ ಗಳು ಮುಂದಿನ ವರ್ಷದವರೆಗೂ ಲಭ್ಯವಿಲ್ಲ. ಪ್ರಸ್ತುತ ಜೈ ಲವಕುಶ ಚಿತ್ರದ ಪ್ರಮೋಷನ್ ನಲ್ಲಿ ಬಿಸಿಯಾಗಿರುವ ಜೂನಿಯರ್ ಎನ್ ಟಿಆರ್ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರಕ್ಕೆ ಸಹಿಹಾಕಿದ್ದಾರೆ. ಹೀಗಾಗಿ ಮುಂದಿನ ಒಂದು ವರ್ಷ ಜೂನಿಯರ್ ಎನ್ ಟಿಆರ್ ಅಲಭ್ಯರಾಗಲಿದ್ದಾರೆ.
ಅಂತೆಯೇ ಅಲ್ಲು ಅರ್ಜುನ್ ಕೂಡ ನಾ ಪೇರು ಸೂರ್ಯ ಎಂಬ ಚಿತ್ರದಲ್ಲಿ ಬಿಸಿಯಾಗಿದ್ದು, ಪ್ರಸ್ತುತ ಈ ಇಬ್ಬರೂ ನಟರು ಹೊಸ ಚಿತ್ರಕ್ಕೆ ಸಹಿ ಹಾಕುವುದು ಸಾಧ್ಯವಿಲ್ಲ. ಇದೇ ಕಾರಣಕ್ಕೆ ರಾಜಮೌಳಿ ಅವರ ಮುಂದಿನ ಚಿತ್ರದಲ್ಲಿ ರಾಮ್ ಚರಣ್ ತೇಜ್ ನಾಯಕರಾಗುವ ಸಾಧ್ಯತೆ ಇದೆ ಎಂಬ ಊಹಾಪೋಹ ದಟ್ಟವಾಗಿದೆ. ಇನ್ನು ರಾಮ್ ಚರಣ್ ತೇಜ್ ಅವರು ಕೊರಟಾಲ ಶಿವ ಅವರ ಕಥೆಗೆ ಓಕೆ ಎಂದಿದ್ದಾರೆಯಾದರೂ ಇನ್ನೂ ಚಿತ್ರಕ್ಕೆ ಸಹಿ ಮಾಡಿಲ್ಲ. ಹೀಗಾಗಿ ಮಗಧೀರ ಬಳಿಕ ರಾಜಮೌಳಿ ರಾಮ್ ಚರಣ್ ಜೋಡಿ ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos