ಹೈದರಾಬಾದ್: ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ನಟ ನಂದಮೂರಿ ಹರಿಕೃಷ್ಣ ಅವರು ಪಂಚಭೂತಗಳಲ್ಲಿ ಲೀನರಾದರು.
ನಿನ್ನೆ ತೆಲಂಗಾಣದ ನಲ್ಗೊಂಡದಲ್ಲಿ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಭೀಕರ ಕಾರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ನಟ ನಂದಮೂರಿ ಹರಿಕೃಷ್ಣ ಅವರ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ಹೈದರಾಬಾದ್ ನ ಜೂಬ್ಲಿಹಿಲ್ಸ್ ನಲ್ಲಿರುವ ಮಹಾಪ್ರಸ್ಥಾಮ್ ರುದ್ರಭೂಮಿಯಲ್ಲಿ ನೆರವೇರಿತು.
ಹರಿಕೃಷ್ಣ ಅವರ ಪಾರ್ಥೀವ ಶರೀರಕ್ಕೆ ಅವರ ಪುತ್ರ ನಟ ನಂದಮೂರಿ ಕಲ್ಯಾಣ್ ರಾಮ್ ಮತ್ತು ನಟ ಜೂನಿಯರ್ ಎನ್ ಟಿಆರ್ ಅಂತಿಮ ವಿಧಿವಿಧಾನ ನೆರವೇರಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಹರಿಕೃಷ್ಣ ಅಂತ್ಯ ಸಂಸ್ಕಾರ ನೆರವೇರಿತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ನಟ ಚಿರಂಜೀವಿ ಮುಂತಾದ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ತಾವೇ ಕಾರು ಚಲಾಯಿಸಿಕೊಂಡು ನಲ್ಲೂರಿನ ಅಭಿಮಾನಿಯೊಬ್ಬರ ಮಗನ ಮದುವೆ ಸಮಾರಂಭಕ್ಕೆ ತೆರಳುವಾಗ ಹರಿಕೃಷ್ಣ ಅವರ ಕಾರಿಗೆ ಅಪಘಾತ ಸಂಭವಿಸಿತ್ತು. ಹರಿಕೃಷ್ಣ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಈ ಹಿಂದೆ ಹರಿಕೃಷ್ಣ ಅವರ ಹಿರಿಯ ಪುತ್ರ ಕೂಡ ಇದೇ ರೀತಿ ಇದೇ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.