ಮಸ್ಕತ್ ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿಕೊಂಡ ನಟ ಶಿವರಾಜ್ ಕುಮಾರ್ ಅಲ್ಲಿ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಕಲ್ಯಾಣ್ ಜ್ಯುವೆಲ್ಲರ್ಸ್ ನ ಶೋರೂಂ ಉದ್ಘಾಟನೆ ವೇಳೆ ಈ ಇಬ್ಬರು ಖ್ಯಾತ ನಟರ ಸಮಾಗಮವಾಗಿದೆ.
ಕರ್ನಾಟಕದಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ನ ಬ್ರ್ಯಾಂಡ್ ಅಂಬಾಸಿಡರ್ ಶಿವರಾಜ್ ಕುಮಾರ್ ಅವರು. ಕಾರ್ಯಕ್ರಮದಲ್ಲಿ ಅಕ್ಕಿನೇನಿ ನಾಗಾರ್ಜುನ, ಪ್ರಭು ಮತ್ತು ಮಲಯಾಳಂ ನಟಿ ಮಂಜು ವಾರಿಯರ್ ಕೂಡ ಭಾಗವಹಿಸಿದ್ದರು.
ಸ್ಯಾಂಡಲ್ ವುಡ್ ನ ಎಸ್ ಆರ್ ಕೆ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ಶಿವರಾಜ್ ಕುಮಾರ್, ಬಾಲಿವುಡ್ ಎಸ್ಆರ್ ಕೆಯನ್ನು ಭೇಟಿ ಮಾಡಿದ್ದು ಸಂತಸ ತಂದಿದೆ ಎಂದಿದ್ದಾರೆ. ಅವರು ತುಂಬಾ ಸರಳ ವ್ಯಕ್ತಿ. ನಾವಿಬ್ಬರೂ ಹೋಲಿಕೆಯಾಗುತ್ತೇವೆ ಎಂದು ನನಗೆ ಹಲವು ಸಾರಿ ಅನ್ನಿಸಿದೆ. ಎಸ್ ಆರ್ ಕೆಯನ್ನು ಬಲ್ಲವರು ಅವರ ಸರಳ ವ್ಯಕ್ತಿತ್ವವನ್ನು ಕೂಡ ಬಲ್ಲರು ಎನ್ನುತ್ತಾರೆ ಶಿವಣ್ಣ.
ನಾನು ಈ ಹಿಂದೆ ಮೂರು ಬಾರಿ ಶಾರೂಕ್ ಖಾನ್ ರನ್ನು ಭೇಟಿ ಮಾಡಿದ್ದೆ. ಆದರೆ ಈ ಬಾರಿ ಸ್ವಲ್ಪ ಹೆಚ್ಚು ಸಮಯ ಮಾತನಾಡಲು ಅವಕಾಶ ಸಿಕ್ಕಿತು. ಅವರು ಯಾವಾಗಲೂ ಸಿಕ್ಕಿದಾಗ ಬೆಂಗಳೂರು ನಗರದ ಮೇಲೆ ಅವರಿಗಿರುವ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. ಈ ಬಾರಿ ಶಾರೂಕ್ ಖಾನ್ ನಮಗೆ ಏನಾದರೊಂದು ಪ್ರದರ್ಶನ ಕೊಡಲು ಹೇಳಿದರು.
ನಾನು ಹಾಡಿದೆ. ನನಗೆ ಒಳ್ಳೆಯ ಧ್ವನಿಯಿದೆ ಎಂದು ಹೊಗಳಿದರು ಎನ್ನುತ್ತಾರೆ ಶಿವಣ್ಣ.
ಮಸ್ಕತ್ ನಿಂದ ಹಿಂತಿರುಗಿರುವ ಶಿವರಾಜ್ ಕುಮಾರ್, ನಿನ್ನೆಯಿಂದ ದ ವಿಲನ್ ಶೂಟಿಂಗ್ ತಂಡವನ್ನು ಸೇರಿದ್ದಾರೆ. ಪ್ರೇಮ್ ನಿರ್ದೇಶನದ ವಿಲನ್ ನಲ್ಲಿ ಸುದೀಪ್ ಮತ್ತು ನಟಿ ಆಮಿ ಜಾಕ್ಸನ್ ಕೂಡ ಅಭಿನಯಿಸುತ್ತಿದ್ದಾರೆ.