ನಿರ್ದೇಶಕ ಸೂರಿಯವರ ಕೆಂಡಸಂಪಿಗೆ ಚಿತ್ರ ವಿಕ್ಕಿ ಮತ್ತು ಮಾನ್ವಿತಾ ಹರೀಶ್ ಅವರ ಸಿನಿಮಾ ವೃತ್ತಿಗೆ ಒಳ್ಳೆಯ ಆರಂಭ ನೀಡಿತ್ತು. ಇದೀಗ ಮತ್ತೊಮ್ಮೆ ಇಬ್ಬರೂ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದ್ದಾರೆ.
ತಮ್ಮ ಮೊದಲ ಚಿತ್ರಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಅದೇ ಹುರಿಪಿನಲ್ಲಿ ಇಬ್ಬರೂ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಮುಂದಾಗಿದ್ದಾರೆ. ಹಲವು ಚಿತ್ರಕಥೆಗಳನ್ನು ಕೇಳುವುದರಲ್ಲಿ ತಲ್ಲೀನರಾಗಿರುವ ವಿಕ್ಕಿ ಮತ್ತು ಮಾನ್ವಿತಾ ಹರೀಶ್ ಸದ್ಯದಲ್ಲಿಯೇ ತಾವು ನಟಿಸುತ್ತಿರುವ ಚಿತ್ರ ಮತ್ತು ನಿರ್ದೇಶಕರ ಬಗ್ಗೆ ವಿವರ ನೀಡಲಿದ್ದಾರೆ ಎಂಬುದು ಅವರ ಅಭಿಮಾನಿಗಳ ಆಶಯ.