ಬೆಂಗಳೂರು: ಇಂದು ನಾನು ಇರುವುದು ಕಾಶಿನಾಥ್ ಅವರಿಂದಲೇ, ಕಾಶಿನಾಥ್ ನನ್ನ ಗುರು, ಮಾರ್ಗದರ್ಶಕ ಎಂದು ನಟ ಉಪೇಂದ್ರ ಅವರು ಗುರುವಾರ ಹೇಳಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿನಾಥ್ ಅವರು ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ್ದರು. ಕಾಶಿನಾಥ್ ಅವರ ಅಗಲಿಕೆ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ ಅವರು ತೀವ್ರವಾಗಿ ಭಾವುಕರಾದರು.
ಇಷ್ಟು ಬೇಗ ನಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಾರೆಂದು ಅಂದುಕೊಂಡಿರಲಿಲ್ಲ. ಇಂದು ನಾನಿರುವುದು ಅವರಿಂದಲೇ. ಕಾಶಿನಾಥ್ ನನ್ನ ಗುರು, ಮಾರ್ಗದರ್ಶಕ. ಇಂದು ಚಿತ್ರರಂಗದಲ್ಲಿ ನಾನು ಏನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದು ಅವರಿಂದಲೇ. ನನ್ನ ಎಲ್ಲಾ ಸಾಧನೆಗಳ ಹಿಂದೆ ಕಾಶಿನಾಥ್ ಇದ್ದಾರೆಂದು ಹೇಳಿದ್ದಾರೆ.
ಬಳಿಕ ಚಿತ್ರರಂಗ ಆರಂಭಿಕ ದಿನಗಳನ್ನು ನೆನೆದ ಉಪೇಂದ್ರ ಅವರು, ಕಾಶಿನಾಥ್ ಅವರ ಮೊದಲ ಬಾರಿ ಭೇಟಿದಾಗ, ನಾನು ಬರೆದಿದ್ದನ್ನೆಲ್ಲವನ್ನೂ ತೆಗೆದುಕೊಂಡು ಹೋಗಿದ್ದೆ. ಅದನ್ನು ನೋಡಿದ ಕಾಶಿನಾಥ್ ಅವರು ಮರುದಿನ ಬರುವಂತೆ ತಿಳಿಸಿದ್ದರು. ಮತ್ತೆ ಅವರನ್ನು ಭೇಟಿಯಾದಾಗ ನನ್ನೊಂದಿಗೆ ಕೈಜೋಡಿಸಿ ಸಹಾಯ ಮಾಡುವಂತೆ ತಿಳಿಸಿದರು. ಆ ಬಳಿಕ ನಾನು ಸಹಾಯಕ ನಿರ್ದೇಶಕನಾಗಿ ಚಿತ್ರರಂಗದಲ್ಲಿ ನನ್ನ ಪ್ರಯಾಣವನ್ನು ಆರಂಭಿಸಿದ್ದೆ.
ಕಾಲೇಜಿನಲ್ಲಿದ್ದಾಗಲೇ ಕಾಶಿನಾಥ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ದೊರಕಿತ್ತು. ಕಾಶಿನಾಥ್ ಅವರ ಚಿತ್ರದಲ್ಲಿ ನಟನೆ ಮಾಡುವುದಕ್ಕೂ ಮೊದಲು ನನಗೆ ಎಲ್ಲಾ ರೀತಿಯ ಕಲೆಗಳನ್ನು ಹೇಳಿಕೊಟ್ಟಿದ್ದರು. ಅವರ ಯೋಜನೆಯ ರೀತಿ ಮತ್ತು ವೈಜ್ಞಾನಿಕ ವಿಧಾನಗಳು ಪ್ರಮುಖ ಗುಣಲಕ್ಷಣಗಳಾಗಿದ್ದವು. ಇಬ್ಬರೂ ಒಂದೇ ರೀತಿಯ ಆಲೋಚನೆ ಮಾಡುತ್ತಿದ್ದರಿಂದ ನಮ್ಮಿಬ್ಬರ ಸಮನ್ವಯತೆ ಉತ್ತಮವಾಗಿತ್ತು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos