ಬೆಂಗಳೂರು: ಇಂದ್ರಜಿತ್ ಲಂಕೇಶ್ ಯಾರೆಂದು ನಾವೇನೂ ಪರಿಚಯಿಸಬೇಕಾದ ಅಗತ್ಯವಿಲ್ಲ. ಇಂದ್ರಜಿತ್ ಕನ್ನಡದ ಒಬ್ಬ ಪ್ರತಿಭಾವಂತ ನಿರ್ದೇಶಕರಾಗಿದ್ದು ಸಾಕಷ್ತು ಉತ್ತಮ ಚಿತ್ರಗಳನ್ನು ಬೆಳ್ಳಿತೆರೆಗೆ ನೀಡಿದ್ದಾರೆ. ಬಾಲಿವುಡ್ ನ ಪ್ರಖ್ಯಾತ ನಟಿಯಾಗಿರುವ ದೀಪಿಕಾ ಪಡುಕೋನೆ ಅವರನ್ನು ಚಿತ್ರ ಜಗತ್ತಿಗೆ ಪರಿಚಯಿಸಿದ್ದು ಸಹ ಇದೇ ಇಂದ್ರಜಿತ್ ಲಂಕೇಶ್. ತಮ್ಮ 'ಐಶ್ವರ್ಯಾ' ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ಅಭಿನಯಿಸುವ ಅವಕಾಶವನ್ನು ನೀಡಿದ್ದ ಇಂದ್ರಜಿತ್ 'ಮೊನಾಲಿಸಾ', 'ತುಂಟಾಟ', 'ಲವ್ ಯು ಆಲಿಯಾ' ಇದೇ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಹೊಸ ಸುದ್ದಿ ಏನೆಂದರೆ ಇಂದ್ರಜಿತ್ ಇದೀಗ ಹಿಂದಿ ಚಿತ್ರವೊಂದರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕನ್ನಡದ ಪುಟ್ಟಣ್ಣ ಕಣಗಾಲ್, ಕಾಶಿನಾಥ್, ರಾಜೇಂದ್ರ ಸಿಂಗ್ ಬಾಬು ಸಹ ಬಾಲುವುಡ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಇದೀಗ ಸುಮಾರು ಇಪ್ಪತ್ತು ವರ್ಷಗಳ ನಂತರ ಮತ್ತೆ ಕನ್ನಡದ ನಿರ್ದೇಶಕರೊಬ್ಬರು ಹಿಂದಿ ಚಿತ್ರ ನಿರ್ದೇಶನಕ್ಕೆ ತೊಡಗಲಿದ್ದಾರೆ. ಚಿತ್ರದ ಕಥೆ ಹೇಗಿರಲಿದೆ ಎನ್ನುವುದು ಇನ್ನೂ ಮಾಹಿತಿ ಇಲ್ಲವಾಗಿದ್ದು ಒಟ್ಟಾರೆ ಚಿತ್ರ ಮಹಿಲಾ ಕೇಂದ್ರಿತ ಕಥೆಯನ್ನು ಆಧರಿಸಿರಲಿದೆ ಎಂದು ಮೂಲಗಳು ತಿಳಿಸಿದೆ.
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಇಂದ್ರಜಿತ್ ತಮ್ಮ ಚೊಚ್ಚಲ ಹಿಂದಿ ಚಿತ್ರದದಲ್ಲಿ ರಿಚಾ ಚಾಧಾ ಅಥವಾ ಸ್ವರಾ ಭಾಸ್ಕರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಇವರಲ್ಲಿ ಯಾರು ನಾಯಕಿಯಾಗಿ ಪಾತ್ರವಹಿಸಲಿದ್ದಾರೆ ಎನ್ನುವುದು ಮುಂದಿನ ಕೆಲ ವಾರಗಳಲ್ಲಿ ತಿಳಿಯಲಿದೆ.
ನಟಿಯೊಬ್ಬರು ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆಗೊಂಡ ಬಳಿಕ ಪೋಷಕ ಪಾತ್ರಗಳು, ತಂತ್ರಜ್ಞರು ಮತ್ತು ನಿರ್ಮಾಪಕರ ವಿವರವನ್ನು ಬಹಿರಂಗಪಡಿಸುವುದಾಗಿ ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ. ಸದ್ಯ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ಲಂಕೇಶ್, ಫೆಬ್ರವರಿ 8ರಿಂದ ಪ್ರಾರಂಭವಾಗುವ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುವ ರಿಯಾಲಿಟಿ ಶೋ 'ಮಜಾ ಟಾಕೀಸ್' ಎರಡನೆಯ ಆವೃತ್ತಿಯಲ್ಲಿ ಭಾಗವಹಿಸುವವರಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos