ಸಿನಿಮಾ ಸುದ್ದಿ

ರಾಮ ರಾಮ ರೇ ನ 'ಸ್ಯಾಂಡಲ್ ರಾಜ' ನಟರಾಜ್ ಈಗ ಕಾಲೇಜು ವಿದ್ಯಾರ್ಥಿ!

Raghavendra Adiga
ಬೆಂಗಳೂರು: ನಿಮಗೆ ’ರಾಮ ರಾಮ ರೇ’ನಲ್ಲಿ ಸ್ಯಾಂಡಲ್ ರಾಜನಾಗಿ ಕಾಣಿಸಿಕೊಂಡಿದ್ದ ನಟರಾಜ್ ನೆನಪಿದೆಯೆ? ನಟರಾಜ್ ಅವರ ಉದ್ದನೆ ನೀಟಾಗಿಲ್ಲದ ಕೂದಲು, ವಿಶಿಷ್ಟ ಪೋಷಾಕಿನಿಂದ ಆ ಚಿತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ನಟರಾಜ್ ಮತ್ತೊಮ್ಮೆ ತಮ್ಮ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮನಗೆಲ್ಲಲು ಬರುತ್ತಿದ್ದಾರೆ. ’ಕಲ್ಬೆಟ್ಟದ ದರೋಡೆಕೋರ’ ಚಿತ್ರದ ಮೂಲಕ ಅವರು ಮತ್ತೆ ಅಭಿಮಾನಿಗಳ ಮುಂದೆ ಹಾಜರಾಗಲಿದ್ದಾರೆ.
ದೀಪಕ್ ಮಡುವನಲ್ಲಿ ನಿರ್ದೇಶನದ ಹೊಸ ಚಿತ್ರದ ಫಸ್ಟ್ ಲುಕ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.
’ಕಲ್ಬೆಟ್ಟದ ದರೋಡೆಕೋರ’ ಚಿತ್ರದಲ್ಲಿ ನಟರಾಜ್ ಓರ್ವ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದು ಇದಕ್ಕಾಗಿ ಕ್ಲೀನ್ ಶೇವ್ ಮಾಡಿಕೊಂಡು ಮಿಂಚಿದ್ದಾರೆ. "ನಾನು ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಹಳ್ಳಿಯಲ್ಲಿರುವ ಕಾಲೇಜೊಂದರ ಕಥೆ ಇಲ್ಲಿದೆ, ರಾಮ ರಾಮ ರೆ ನಲ್ಲಿ ನನ್ನ ಪಾತ್ರ ಹೆಚ್ಚು ಮಾತನಾಡದ, ಮುಖದಲ್ಲೇ ಭಾವನೆಗಳನ್ನು ಹೊರಹೊಮ್ಮಿಸುವ ಮೂಲಕ  ಬಹಳ ಪ್ರಸಿದ್ದಿ ಪಡೆದಿತ್ತು.ಅದೊಂದು ಸಂಪೂರ್ಣ  ವಿಭಿನ್ನ ಅನುಭವ" ನಟರಾಜ್ ಹೇಳಿದ್ದಾರೆ.
ಟಿವಿ ತಾರೆಯಾದ ಶ್ವೇತಾ ಪ್ರಸಾದ್ ಈ ಚಿತ್ರದ ನಾಯಕಿಯಾಗಿದ್ದು ಚಿತ್ರದಲ್ಲಿ ಅವರು ’ಕಮಲಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಶ್ ಶೆಟ್ಟಿ ಬರೆದಿರುವ ಕಾದಂಬರಿಯೊಂದರ ಆಧಾರದಲ್ಲಿ ಚಿತ್ರ ತಯಾರಾಗುತ್ತಿದ್ದು ಹೇಮಂತ್ ಖಳನಟನಾಗಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಸುಂದರ್ ರಾಜ್, ಮಂಜುನಾಥ್, ಅನಿಲ್ ನೀನಾಸಮ್ ಇನ್ನೂ ಮುಂತಾದವರ ಅಭಿನಯವಿದೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿದಿದ್ದು ಸೆನ್ಸಾರ್ ಮಂಡಳಿ ವೀಕ್ಷಣೆಗೆ ಚಿತ್ರ ಸಿದ್ದವಿದೆ. ಅನೂಪ್ ಸೀಳನ್ ಸಂಗೀತವಿರುವ ಈ ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು ಜುಲೈ ಅಥವಾ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ.
SCROLL FOR NEXT