ಬೆಂಗಳೂರು: ಕಲೆಗೆ ಗಡಿಯ ಎಲ್ಲೇ ಎಂಬುದು ಇರುವುದಿಲ್ಲ ಎಂಬುದನನ್ನು ತಮಿಳು ನಟ ಸಿಂಬು ಸಾಬೀತು ಪಡಿಸಿದ್ದಾರೆ. ತಮಿಳು ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದ ಸಿಂಬು ಮೊದಲ ಬಾರಿಗೆ ಕನ್ನಡ ಹಾಡೊಂದನ್ನು ಹಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, "ಇರುವುದೆಲ್ಲವ ಬಿಟ್ಟು' ಚಿತ್ರದ ಹಾಡಿಗೆ ಸಿಂಬು ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಿರ್ದೇಶಕ ಕಾಂತರಾಜ್ ಕನ್ನಲ್ಲಿ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರೊಂದಿಗೆ ಚೆನ್ನೈಗೆ ತೆರಳಿ, ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿಸಿಕೊಂಡು ಬಂದಿದ್ದಾರೆ.
ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಬರೆದ ಹಾಡಿಗೆ ಸಿಂಬು ಧ್ವನಿಯಾಗಿದ್ದಾರೆ. ಈ ಹಾಡು ತುಂಬಾ ಸ್ಪೀಡ್ ಇದ್ದುದರಿಂದ, ಮೊದಲು ಹಾಡನ್ನು ಅಭ್ಯಾಸ ಮಾಡಿಕೊಂಡು ಆ ಬಳಿಕ ಸ್ಪಷ್ಟ ಕನ್ನಡದಲ್ಲಿ ಹಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ತೆಲುಗು, ತಮಿಳು ಚಿತ್ರಗಳಿಗೆ ಹಾಡಿರುವ ಸಿಂಬು, ಇದೇ ಮೊದಲ ಸಲ ಕನ್ನಡದ ಚಿತ್ರಕ್ಕೆ ಹಾಡಿದ್ದಾರೆ. ಹಾಡಿದ ನಂತರ, ಏನಾದರೂ ಕನ್ನಡ ಪದ ತಪ್ಪಿದ್ದರೆ ದಯವಿಟ್ಟು ತಿಳಿಸಿ, ಪುನಃ ಸ್ಪಷ್ಟವಾಗಿ ಹಾಡುವೆ ಎಂದು ಹೇಳುವ ಮೂಲಕ ಕನ್ನಡ ಭಾಷೆ ಕುರಿತು ಪ್ರೀತಿ ತೋರಿದ್ದಾಗಿ ಹೇಳುತ್ತಾರೆ ನಿರ್ದೇಶಕರು.