ಸಿನಿಮಾ ಸುದ್ದಿ

ಬೇಸಿಗೆ ರಜೆಯಲ್ಲಿ ರವಿ ಬಸ್ರೂರ್ ಚಿತ್ರದಲ್ಲಿ 200 ಮಕ್ಕಳು ಭಾಗಿ

Sumana Upadhyaya

ಶಾಲಾ ಮಕ್ಕಳಿಗೆ ಇದೀಗ ಬೇಸಿಗೆ ರಜೆ. ಈ ಸಂದರ್ಭದಲ್ಲಿ ನಿರ್ದೇಶಕ ರವಿ ಬಸ್ರೂರು ಮಕ್ಕಳಿಗಿಂತಲೂ ಖುಷಿಯಾಗಿದ್ದಾರೆ. ತಮ್ಮೂರು ಕಾರವಳ್ಳಿಯಲ್ಲಿ ಚಿತ್ರದ ಶೂಟಿಂಗ್ ಮಾಡುತ್ತಿರುವ ಅವರು ರಾಜ್ಯಾದ್ಯಂತದಿಂದ ಸುಮಾರು 200 ಮಕ್ಕಳನ್ನು ಕರೆಸಿಕೊಂಡಿದ್ದಾರೆ.

ಈ ಮಧ್ಯೆ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿರುವ ರವಿ ಬಸ್ರೂರು ಕೆಜಿಎಫ್ ಗೆ ರಾಗಗಳ ಸಂಯೋಜನೆಯಲ್ಲಿ, ಕಾಟಕ ಮುಂದುವರಿದ ಭಾಗಕ್ಕೆ ಸಂಭಾಷಣೆ ಮತ್ತು ಇನ್ನೂ ಹೆಸರಿಡದ ಎನ್ ಎಸ್ ರವಿಕುಮಾರ್ ನಿರ್ಮಾಣದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಅವರು, ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದೆ. ಶಾಲೆ ಆರಂಭವಾಗುವ ಮುನ್ನ ಮಕ್ಕಳ ಭಾಗದ ಸಂಪೂರ್ಣ ಚಿತ್ರೀಕರಣ ಮುಗಿಸಬೇಕೆಂದಿದ್ದೇನೆ. ಮೇ 30ರೊಳಗೆ ಮುಗಿಸುವ ಉದ್ದೇಶ ನನ್ನದು ಎನ್ನುತ್ತಾರೆ ರವಿ. ಇದರಲ್ಲಿ ಬಾಲ ಕಲಾವಿದೆ ಶ್ಲಾಘ ಸಾಲಿಗ್ರಾಮ ಮಾತ್ರವಲ್ಲದೆ, ಬೆಂಗಳೂರು, ಮಂಡ್ಯ, ರಾಮನಗರ ಮೊದಲಾದ ಕಡೆಗಳಿಂದ ಸುಮಾರು 200 ಮಕ್ಕಳು ಚಿತ್ರೀಕರಣಕ್ಕೆ ಆಗಮಿಸುತ್ತಿದ್ದಾರೆ.

ಕಾಟಕ ಚಿತ್ರ ಮಾಡುವಾಗ ಈ ಮಕ್ಕಳ ಆಡಿಶನ್ ಮಾಡಿಕೊಂಡಿದ್ದೆ. ಇವರಲ್ಲಿ ಬಹುತೇಕರು ಪ್ರತಿಭಾನ್ವಿತರಾಗಿದ್ದರೂ ಕೂಡ ಆ ಚಿತ್ರಕ್ಕೆ ನಾನು ಒಬ್ಬ ಬಾಲ ಕಲಾವಿದೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಈ ಮಕ್ಕಳು ನನ್ನ ಮನಸ್ಸಿನಲ್ಲಿದ್ದರು ಅವರ ಪ್ರತಿಭೆಯನ್ನು ತೆರೆಯ ಮೇಲೆ ತರುವುದು ನನ್ನ ಉದ್ದೇಶವಾಗಿತ್ತು. ಅದೃಷ್ಟಕ್ಕೆ ಈ ಚಿತ್ರದ ಕಥೆ ಕೂಡ ಅದಕ್ಕೆ ಪೂರಕವಾಗಿತ್ತು. ಅದಕ್ಕೆ ನನಗೆ ಈ ಚಿತ್ರ ಮಾಡಲು ಖುಷಿಯಾಗುತ್ತಿದೆ ಎನ್ನುತ್ತಾರೆ ರವಿ ಬಸ್ರೂರು,

ಈ ಚಿತ್ರದಲ್ಲಿ ನಾಯಕ-ನಾಯಕಿ ಇರುವುದಿಲ್ಲವಂತೆ. ಸತ್ಯ ಘಟನೆಯಾಧಾರಿತ ಚಿತ್ರ ಕೂಡ ಅಲ್ಲ. ಪ್ರತಿಯೊಬ್ಬರ ಅಕ್ಕಪಕ್ಕ, ನೆರೆಮನೆಗಳಲ್ಲಿ ನಡೆಯುವ ಕಥೆಯಿದು. ಇದನ್ನು ಕಮರ್ಷಿಯಲ್ ಚಿತ್ರವಾಗಿ ತೆರೆ ಮೇಲೆ ತರುತ್ತಿದ್ದೇನೆ. ಕನ್ನಡ ಚಿತ್ರಗಳಲ್ಲಿ ಅಪರೂಪದ ಚಿತ್ರವಿದು ಎನ್ನುತ್ತಾರೆ.
ಬಾಲ ಕಲಾವಿದೆ ಶ್ಲಾಘ ಮುಖ್ಯ ಪಾತ್ರ ವಹಿಸುತ್ತಿದ್ದರೆ, ಆಶ್ಲೇಶ್ ಅವರನ್ನು ಕೂಡ ಪರಿಚಯಿಸುತ್ತಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ನ ಚಿತ್ರಾಲಿ, ಶ್ರೀಶಾ, ಕಾವ್ಯ ಮರವಂತೆ ಕೂಡ ಇರುತ್ತಾರೆ. ರವಿ ಬಸ್ರೂರ್ ಅವರ ಸಂಗೀತ, ಸಚಿನ್ ಬಸ್ರೂರ್ ಅವರ ಫೋಟೋಗ್ರಫಿ ಚಿತ್ರಕ್ಕಿದೆ.

ಕೆಜಿಎಫ್ ಚಿತ್ರದ ಶೇಕಡಾ 70 ಭಾಗದ ಚಿತ್ರೀಕರಣ ಮುಗಿದಿದ್ದು ನಿರ್ದೇಶಕರ ಕಡೆಯಿಂದ ಕೆಲವು ಬಾಕಿಯಿದೆ. ಕೆಜಿಎಫ್ ಮತ್ತು ಸುನಿಯವರ ಬಜಾರ್ ಗೆ ಸಂಗೀತ ಸಂಯೋಜನೆ ಮಾಡುತ್ತಿದ್ದೇನೆ ಎಂದರು ರವಿ ಬಸ್ರೂರು.

SCROLL FOR NEXT