ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಬೆಂಬಲಕ್ಕೆ ನಿಂತಿರುವ ನಟ ಚೇತನ್ ವರ್ತನೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಟ ಚೇತನ್ ಅವರು ಫೈರ್ ಸಂಸ್ಥೆಯನ್ನು ಮೀಟೂ ಅಭಿಯಾನಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷೆಯಾಗಿರುವ ಪ್ರಿಯಾಂಕಾ ಉಪೇಂದ್ರ ಅವರು ಹೇಳಿದ್ದಾರೆ.
ಫೈರ್ ಸಂಸ್ಥೆಯ ಉದ್ದೇಶವೇ ಹಾದಿ ತಪ್ಪಿದೆ. ಅದರ ಉದ್ದೇಶವೇ ಬೇರೆ, ಈಗಿನ ಫೈರ್ ಸಂಸ್ಥೆಯೇ ಬೇರೆ. ಪ್ರಾರಂಭದಲ್ಲಿ ಫೈರ್ ಸಂಸ್ಥೆಯ ಉದ್ದೇಶ ಚಿತ್ರರಂಗದ ಸಮಸ್ಯೆಗಳನ್ನು ನಿವಾರಿಸುವುದಾಗಿತ್ತು. ಮಹಿಳೆಯರ ಸಮಸ್ಯೆಗಳನ್ನು ಅಂತರಿಕವಾಗಿ ಬಗೆಹರಿಸುವುದಾಗಿತ್ತು. ಮೀಟೂ ಅಭಿಯಾನದ ಕುರಿತು ತುಂಬಾ ಗೌರವವಿದೆ. ಆದರೆ ಮೀಟೂ ಅಭಿಯಾನಕ್ಕೆ ಫೈರ್ ಸಂಸ್ಥೆಯನ್ನು ಬಳಸಿಕೊಂಡಿದ್ದು ತಪ್ಪು. ಶ್ರುತಿ ಮಿ ಟೂ ಅಭಿಯಾನವನ್ನು ಫೈರ್ ಸಂಸ್ಥೆಯೊಂದಿಗೆ ಲಿಂಕ್ ಮಾಡಿದ್ದು ತಪ್ಪು, ಅವರು ಸಂಸ್ಥೆಯ ಉದ್ದೇಶವನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಮತ್ತು ಚೇತನ್ ಅವರು ಒಟ್ಟಿಗೆ ಸೇರಿ ಫೈರ್ ಸಂಸ್ಥೆ ಪ್ರಾರಂಭಿಸಿದ್ದರು. ಆದರೆ ಕಾಲಕ್ರಮೇಣ ಫೈರ್ ಸಂಸ್ಥೆಯ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಿಯಾಂಕಾ ಉಪೇಂದ್ರ 6 ತಿಂಗಳ ಹಿಂದೆ ಅಧ್ಯಕ್ಷೆ ಸ್ಥಾನವನ್ನು ತ್ಯಜಿಸಿದ್ದರು. ಈಗ ಫೈರ್ ಸಂಸ್ಥೆಯ ಸದಸ್ಯತ್ವಕ್ಕೂ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕದ ಸಿನಿಮಾ ಉದ್ಯಮ ಕ್ಷೇತ್ರದಲ್ಲಿ ಹಕ್ಕು ಮತ್ತು ಸಮಾನತೆ (ಫೈರ್) ಒಂದು ಲಾಭೇತರ ಸಂಘಟನೆಯಾಗಿದ್ದು ಸೊಸೈಟಿ ಕಾಯ್ದೆಯಡಿ ಅದನ್ನು ರಚಿಸಲಾಗಿದೆ. ಇದಕ್ಕೆ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅಧ್ಯಕ್ಷೆ. ಐಸಿಸಿಯ 11 ಮಂದಿ ಸದಸ್ಯರಲ್ಲಿ 9 ಮಹಿಳೆಯರು ಮತ್ತು ಇಬ್ಬರು ಕಾನೂನು ತಜ್ಞರು ಇದ್ದಾರೆ. ನಟ ಚೇತನ್ ಸಂಘಟನೆಯ ಕಾರ್ಯದರ್ಶಿಯಾಗಿದ್ದು, ನಟಿ ರೇಖಾ ರಾಣಿ ಖಜಾಂಚಿಯಾಗಿದ್ದಾರೆ.
11 ಸದಸ್ಯರಲ್ಲಿ ಕವಿತಾ ಲಂಕೇಶ್, ಕಾನೂನು ತಜ್ಞರಾಜ ಜಯಣ್ಣ ಕೊಟಹ್ರಿ ಮತ್ತು ಮಾರುತಿ ಜಡೆಯರ್, ರೇಖಾ ರಾಣಿ, ನಟಿ ಪಂಚಮಿ, ವಿಜಯಲಕ್ಷ್ಮಿ ಪಾಟೀಲ್, ವಿಜಯಮ್ಮ, ವೀಣಾ ಸುಂದರ್, ರೂಪಾ ಅಯ್ಯರ್, ನಟಿ ಶೃತಿ ಹರಿಹರನ್, ನಟ ಚೇತನ್ ಒಳಗೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos