ಕಿರುತೆರೆಯಿಂದ ಹಿರಿತೆರೆಗೆ ಬಂದಿರುವ ಪ್ರಮೋದ್ ಗೆ ತಾಳ್ಮೆಯೇ ಉತ್ತಮ ಸ್ನೇಹಿತನಂತೆ ಕಂಡಿದೆ. 2015ರಲ್ಲಿ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ ಪ್ರಮೋದ್ ಎರಡನೇ ಚಿತ್ರ ಪ್ರೀಮಿಯರ್ ಪದ್ಮಿನಿಗೆ ಬರಲು ಸುಮಾರು 3 ವರ್ಷ ಬೇಕಾಯಿತು.
ಉತ್ತಮ ಕಥೆಯ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದ ಪ್ರಮೋದ್ ನಂತರ ಕಷ್ಟದ ಸೋಲಿನ ದಿನಗಳನ್ನು ಕಂಡರು. ಇಂದು ಮತ್ತೆ ವೃತ್ತಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು ಹೊಸದನ್ನು ನಿರೀಕ್ಷಿಸುತ್ತಿದ್ದೇನೆ ಎಂದರು. ಚಿತ್ರದಲ್ಲಿ ಪಾತ್ರ ನನಗೆ ಹತ್ತಿರವಾಗಬೇಕು. ಕೆಲವು ಕಹಿ ಅನುಭವಗಳೊಂದಿಗೆ ಸಿನಿಮಾದ ನಿರ್ಮಾಣ ಸಂಸ್ಥೆ ಕೂಡ ಮುಖ್ಯ ಎನ್ನುವುದು ಗೊತ್ತಾಗಿದೆ. ಇದಕ್ಕೆಲ್ಲಾ ಸಮಯ ಹಿಡಿದಿದೆ ಎಂದರು.
ಪ್ರೀಮಿಯರ್ ಪದ್ಮಿನಿ ಚಿತ್ರ ನಿರ್ಮಿಸಿದವರು ಧಾರಾವಾಹಿ ನಿರ್ಮಾಪಕಿ ಶೃತಿ ನಾಯ್ಡು. ನಿರ್ದೇಶಕ ರಮೇಶ್ ಇಂದ್ರ ಅವರು ಬಂದು ಕಥೆ ಹೇಳಿದಾಗ ಹಿಡಿಸಿತು. ಒಂದು ನಿರ್ದಿಷ್ಟ ಪಾತ್ರಕ್ಕೆ ಅವರು ನನ್ನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ನನ್ನ ಮೊದಲ ಸಿನಿಮಾ ನೋಡಿದ್ದ ಅವರು, ಈ ಪಾತ್ರಕ್ಕೆ ಹೊಂದಿಕೆಯಾಗುತ್ತೇನೆ ಎಂದು ಅನಿಸಿರಬೇಕು, ನಿರ್ಮಾಪಕರ ಮನವೊಲಿಸಿ ನನ್ನನ್ನು ಪಾತ್ರಕ್ಕೆ ಹಾಕಿದರು. ಅವರಿಬ್ಬರಿಗೂ ಬೇಸರವಾಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎನಿಸುತ್ತದೆ ಎಂದರು ಪ್ರಮೋದ್.ಚಿತ್ರದಲ್ಲಿ ತಮ್ಮದು ಎರಡು ಪಾತ್ರವಿದೆ ಎಂದರು.
ಮೇರು ನಟ ಜಗ್ಗೇಶ್ ಅವರು ಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದು ಅವರ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ ನೀಡಿತು. ಅವರಿಂದ ಅನೇಕ ವಿಷಯಗಳನ್ನು ಕಲಿತು ನನ್ನನ್ನು ಗುರುತಿಸಿಕೊಳ್ಳಲು ಸಹಕಾರಿಯಾಯಿತು ಎಂದರು.