ಕನ್ನಡ ಸಿನಿಮಾಗಳು ಸದ್ದಿಲ್ಲದೆ ಸುದ್ದಿಯಾಗುತ್ತಾ ಇವೆ, 'ಒಂದಲ್ಲ ಎರಡಲ್ಲ' ಸಿನಿಮಾ ಕೂಡ ಭಾರೀ ಸದ್ದು ಮಾಡುತ್ತಿದೆ. ಕಳೆದ ವರ್ಷ ರಿಲೀಸ್ ಆಗಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಒಳ್ಳೆ ಪ್ರತಿಪ್ರಿಯೆ ಪಡೆದಿದ್ದ ಸಿನಿಮಾಕ್ಕೆ ಈಗ ಮತ್ತೊಂದು ಗೌರವ ಸಿಕ್ಕಿದೆ.
ಕನ್ನಡದ ಅದ್ಭುತ ಸಿನಿಮಾಗಳಲ್ಲಿ ಒಂದಾದ ‘ರಾಮ ರಾಮ ರೇ’ ನಿರ್ದೇಶಕ ಸತ್ಯ ಪ್ರಕಾಶ್ ನಿರ್ದೇಶನದ, ‘ಒಂದಲ್ಲ ಎರಡಲ್ಲ’ ಸಿನಿಮಾಕ್ಕೆ ಕ್ರಿಟಿಕ್ ಚಾಯ್ಸ್ ಫಿಲಂ ಅವಾರ್ಡ್ಸ್ ಸಿಕ್ಕಿದೆ.
ಹೆಬ್ಬುಲಿ ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ರು. ನಿನ್ನೆ ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ದೇಶದ ವಿಮರ್ಶಕರ ಸೊಸೈಟಿಯಿಂದ ನೀಡಲ್ಪಡುವ ಸಿಸಿಎಫ್ಎ ದಕ್ಷಿಣದ ಅತ್ಯುತ್ತಮ ಸಿನಿಮಾ ಅವಾರ್ಡ್ ಬಾಚಿಕೊಂಡಿದ್ದಾರೆ.
ಸತ್ಯಪ್ರಕಾಶ್ ಅವರ ಸಾಮಾಜಿಕ ಡ್ರಾಮಾ 7 ವರ್ಷದ ಮಗುವನ್ನು ಕುರಿತಾಗಿದ್ದು, ಸಮೀರಾ ಮತ್ತು ಹಸು ಬಾನುಗೆ ಸಂಬಂಧಿಸಿದ ಕಥೆಯಾಗಿದೆ, ಈ ಸಿನಿಮಾ ರಿಮೇಕ್ ರೈಟ್ಸ್ ಗಾಗಿ ಮುಗಿಬಿದ್ದಿದ್ದಾರೆ, ತೆಲುಗು, ತಮಿಳು ಮತ್ತು ಮರಾಠಿ ಭಾಷೆಗೆ ರಿಮೇಕ್ ಹಕ್ಕು ಪಡೆಯಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ನಿರ್ಮಾಪಕರ ಜೊತೆ ಚರ್ಚೆ ನಡೆಸಲಾಗಿದೆ.