ತಮ್ಮ ಜೋಳಿಗೆಯಲ್ಲಿ ಈಗಾಗಲೇ ಸಾಕಷ್ಚು ಸಿನಿಮಾಗಳಿದ್ದರೂ ನಟ ಚಿರಂಜೀವಿ ಸರ್ಜಾ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಶರಣ್ ಅಭಿನಯದ "ವಿಕ್ಟರಿ-2' ಚಿತ್ರವನ್ನು ನಿರ್ಮಿಸಿದ್ದ ತರುಣ್ ಶಿವಪ್ಪ, ಚಿರಂಜೀವಿ ಸರ್ಜಾ ಅವರ ಅಭಿನಯದ ಹೊಸ ಸಿನಿಮಾಗೆ ನಿರ್ಮಾಪಕರು. ಇನ್ನು, ನವೀನ್ ರೆಡ್ಡಿ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಹಾಗಂತ, ಅನುಭವ ಇಲ್ಲವೆಂದಲ್ಲ, ಈ ಹಿಂದೆ ತರುಣ್ ಶಿವಪ್ಪ ನಿರ್ಮಾಣದ "ಮಾಸ್ ಲೀಡರ್', "ರೋಜ್' ಚಿತ್ರದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಇದಲ್ಲದೇ ರಾಜಾ ಮಾರ್ತಂಡ, ರಣಂ, ಮತ್ತು ಸಿಂಗ ಹಾಗೂ ಕಡ್ಡಿಪುಡಿ ಚಂದ್ರು ನಿರ್ಮಿಸಿ ನಾಗಾಭರಣ ನಿರ್ದೇಶಿಸುತ್ತಿರುವ ಜುಗಾರಿ ಕ್ರಾಸ್ ನಲ್ಲಿ ಮತ್ತು ಅನಿಲ್ ಮಂಡ್ಯ ನಿರ್ದೇಶನದ ಮತ್ತೊಂದು ಸಿನಿಮಾದಲ್ಲೂ ಚಿರಂಜೀವಿ ಸರ್ಜಾ ನಟಿಸುತ್ತಿದ್ದಾರೆ.
ತರುಣ್ ಶಿವಪ್ಪ ಅವರ ಹೊಸ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ,
ಫೆಬ್ರವರಿ 12 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಈ ಕುರಿತು ಮಾಹಿತಿ ನೀಡಿದ ನಿರ್ಮಾಪಕ ತರುಣ್ ಶಿವಪ್ಪ, "ಚಿರಂಜೀವಿ ಸರ್ಜಾ ಅವರೊಂದಿಗೆ ಈ ಹಿಂದೆಯೇ ಒಂದು ಚಿತ್ರ ಮಾಡಬೇಕೆಂಬ ಬಗ್ಗೆ ಯೋಚನೆ ಇತ್ತು.ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ಇನ್ನು, ಕಥೆಯನ್ನು ತಮಿಳಿನ ವಿದ್ಯಾದರ್ ಬರೆದಿದ್ದಾರೆ. ಇವರು ತಮಿಳಿನ "ನ್ಯೂ' ಚಿತ್ರ ನಿರ್ದೇಶಿಸಿದವರು. . ಈ ಚಿತ್ರಕ್ಕೆ ಬಾಲು ಛಾಯಾಗ್ರಹಣ ಮಾಡುತ್ತಿದ್ದಾರೆ. ಇದು ಇವರಿಗೆ ಕನ್ನಡದ ಮೊದಲ ಚಿತ್ರವಿದು.
ಈ ಹಿಂದೆ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ಸ್ ನಿರ್ದೇಶನದ ಹಾಲಿವುಡ್ ಚಿತ್ರಕ್ಕೆ ಕ್ಯಾಮೆರಾ ವಿಭಾಗದಲ್ಲಿ ಕೆಲಸ ಮಾಡಿದ್ದವರು. ತಮಿಳಿನ ಅನೇಕ ಸ್ಟಾರ್ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಇನ್ನುಳಿದಂತೆ "ಸಂಕಷ್ಟಕರ ಗಣಪತಿ' ಚಿತ್ರಕ್ಕೆ ಸಂಗೀತ ನೀಡಿದ್ದ ಋತ್ವಿಕ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.