ಬೆಂಗಳೂರು: ಚಂದನವನದ ನಗೆಮೊಗದ ಸರದಾರ, ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ಕೇಕ್ ಕಟ್ ಮಾಡಿ ಹಾರ, ತುರಾಯಿ ಹಾಕಿಸಿಕೊಳ್ಳದಿದ್ದರೇನು, ನಾವಂತೂ ಶುಭ ಹಾರೈಸುತ್ತೇವೆ ಎಂದು ಚಿತ್ರರಂಗದ ಗಣ್ಯರು, ಕಲಾಭಿಮಾನಿಗಳು ಜಾಲತಾಣಗಳಲ್ಲಿ ‘ಹ್ಯಾಪಿ ಬರ್ತ್ ಡೇ’ ಹೇಳಿದ್ದಾರೆ. ಅವರ ಅಭಿನಯದ 'ಗೀತಾ' ಚಿತ್ರತಂಡ ಟೀಸರ್ ಬಿಡುಗಡೆಗೊಳಿಸುವ ಮೂಲಕ ಸರ್ ಪ್ರೈಸ್ ಗಿಫ್ಟ್ ನೀಡಿದೆ.
ಹೌದು, ಮಂಗಳವಾರ ಜುಲೈ 2 ಗಣೇಶ್ ಹುಟ್ಟಿದ ದಿನ. ಆದರೆ ತಂದೆ ವಿಧಿವಶರಾದ ದುಃಖದಲ್ಲಿರುವ ಗಣೇಶ್, ಈ ವರ್ಷ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಮುಂಚಿತವಾಗಿಯೇ ಟ್ವೀಟ್ ಮಾಡಿದ್ದರು. ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಆಭಿಮಾನಿಗಳು ಮನೆಗೆ ಬರುವುದು ಬೇಡ, ಹಾರ, ತುರಾಯಿಗೆ ಹಣ ಖರ್ಚು ಮಾಡಬೇಡಿ, ಅದೇ ದುಡ್ಡನ್ನು ಅನಾಥಾಶ್ರಮಕ್ಕೆ ನೀಡಿ, ನಿಮ್ಮ ಪ್ರೀತಿಗೆ ನಾನೆಂದೂ ಋಣಿಯಾಗಿರುವೆ ಎಂದು ಮನವಿಯನ್ನೂ ಮಾಡಿಕೊಂಡಿದ್ದರು.
ಗೀತಾ ಚಿತ್ರ ತಂಡ ಟೀಸರ್ ಬಿಡುಗಡೆಗೊಳಿಸಿ, ಗಣಿಯ ಖುಷಿ ಹೆಚ್ಚಿಸಿದ್ದರೆ, ನಟಿ ಅಮೂಲ್ಯ, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ ಮೊದಲಾದವರು ಟ್ವಿಟರ್ ಮೂಲಕ ಶುಭ ಕೋರಿದ್ದಾರೆ.