ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ಗೀತಾ" ಚಿತ್ರ ಇದೇ ಸೆಪ್ಟೆಂಬರ್ 6ಕ್ಕೆ ತೆರೆ ಕಾಣಲಿದೆ. ಚಿತ್ರತಂಡ ಇದಾಗಲೇ ಚಿತ್ರದ ಬಿಡುಗಡೆಗೆ ಸಕಲ ತಯಾರಿ ನಡೆಸಿದೆ. ನಿರ್ದೇಶಕ ವಿಜಯ್ ನಾಗೇಂದ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರೆ ಗಣೇಶ್ ತಮ್ಮ ಹೋಂ ಬ್ಯಾನರ್ ನಡಿಯಲ್ಲಿ ನಿರ್ಮಾಪಕ ಸೈಯದ್ ಸಲಾಮ್ ಜತೆಗೆ ಈ ಚಿತ್ರ ನಿರ್ಮಿಸಿದ್ದಾರೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯದ ಬಳಿಕ ಶಿಘ್ರವೇ ಸೆನ್ಸಾರ್ ಮಂಡಳಿಗೆ ಚಿತ್ರವನ್ನು ಕಳಿಸಲಾಗುವುದು. ಏತನ್ಮಧ್ಯೆ, ಅನುಪ್ ರುಬೆನ್ಸ್ ಅವರ ಸಂಗೀತವಿರುವ ಮೇಗಾ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಆಗಸ್ಟ್ ಗೆ ನಡೆಸಲು ಚಿತ್ರತಂಡ ನಿರ್ಧರಿಸಿದೆ.
ಇದೊಂದು ರೊಮ್ಯಾಂಟಿಕ್ ಡ್ರಾಮಾ ಆಗಿದ್ದು ಗಣೇಶ್ ಪಾಲಿಗೆ ಬಹಳ ವಿಶೇಷ ಚಿತ್ರವಾಗಿದೆ.ಚಿತ್ರದ ಶೀರ್ಷಿಕೆ ಇದಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರದಲ್ಲಿ ಗೋಕಾಕ್ ಚಳವಳಿಯ ಛಾಯೆಯನ್ನೂ ಬಳಸಿಕೊಳ್ಲಲಾಗಿದೆ.ಇಂತಹಾ ಚಳವಳಿಯ ಕಥಾನಕವೊಂದು ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವುದು ಇದು ಮೊದಲು ಎನ್ನಲಾಗಿದೆ.
ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಅದರಲ್ಲಿ ಪಾರ್ವತಿ ಅರುಣ್, ಪ್ರಯಾಗ ಮಾರ್ಟಿನ್ ಪಾಲಿಗಿದು ಚೊಚ್ಚಲ ಕನ್ನಡ ಚಿತ್ರವಾಗಿರಲಿದೆ. ಇನ್ನು ಇವರೊಡನೆ ಶಾನ್ವಿ ಶ್ರೀವಾಸ್ತವ ಸಹ ಗಣೇಶ್ ಜತೆ ತೆರೆ ಹಂಚಿಕೊಳ್ಲುತ್ತಿದ್ದಾರೆ.