ಸಿನಿಮಾ ಸುದ್ದಿ

ಮಹೇಶ್ ಬಾಬುಗಾಗಿ ಮಾಡಿದ್ದ ಕಥೆ ಯಶ್ ಪಾಲು: ಪುರಿ ಜಗನ್ನಾಥ್ ಚಿತ್ರಕ್ಕೆ ರಾಕಿ ಭಾಯ್ ಹೀರೋ!

Shilpa D
ಪ್ರಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಜನ ಗಣ ಮನ’ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.
ಕೆಜಿಎಫ್' ಸಿನಿಮಾದಿಂದ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಭಾರತದ ದೊಡ್ಡ ದೊಡ್ಡ ನಿರ್ದೇಶಕರು ಅವರ ಜೊತೆಗೆ ಸಿನಿಮಾ ಮಾಡುವ ಆಸೆ ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ರಾಕಿ ಬಾಯ್ ಜೊತೆ ಸಿನಿಮಾ ಮಾಡುವ ತಯಾರಿ ನಡೆಸಿದ್ದಾರೆ. 
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗಾಗಿ ಪೂರಿ ಜಗನ್ನಾಥ್ ಒಂದು ಕಥೆ ಮಾಡಿದ್ದರು. 'ಪೋಕರಿ' ಹಾಗೂ 'ಬಿಜಿನೆಸ್ ಮ್ಯಾನ್' ಚಿತ್ರಗಳ ಬಳಿಕ ಬರುತ್ತಿದ್ದ ಹ್ಯಾಟ್ರಿಕ್ ಸಿನಿಮಾ ಇದಾಗಿತ್ತು. ಆ ಸಿನಿಮಾಗೆ 'ಜನ ಗಣ ಮನ' ಎಂಬ ಶೀರ್ಷಿಕೆ ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಹೇಶ್ ಬಾಬು ಚಿತ್ರದಿಂದ ಹೊರ ನಡೆದಿದ್ದಾರೆ. 
ಹೀಗಾಗಿ ಯಶ್ ಅವರೊಂದಿಗೆ ಬೆಂಗಳೂರಿನಲ್ಲಿಯೇ ಎರಡು ಸಾರಿ ಮಾತುಕತೆ ನಡೆಸಿರುವ ಜಗನ್ನಾಥ್ ಎಲ್ಲವನ್ನು ಫೈನಲ್ ಮಾಡಿಕೊಂಡಿದ್ದಾರೆ. ಕೊನೆ ಹಂತದ ಮಾತುಕತೆಗೆ ಇನ್ನೊಮ್ಮೆ ಬರುವ ಸಾಧ್ಯತೆ ಇದೆ.
'ಜನ ಗಣ ಮನ' ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಿರ್ದೇಶಕ ಪೂರಿ ಜಗನ್ನಾಥ್ ಪ್ಲಾನ್ ಮಾಡಿದ್ದಾರೆ. 'ಕೆಜಿಎಫ್' ಚಿತ್ರದಿಂದ ದೇಶಾದ್ಯಂತ ಜನಪ್ರಿಯತೆ ಪಡೆದಿರುವ ಯಶ್ ಈ ಚಿತ್ರಕ್ಕೆ ಉತ್ತಮ ಆಯ್ಕೆ ಎಂದು ಅವರಿಗೆ ಅನಿಸಿದೆ. ದಕ್ಷಿಣ ಭಾರತದ ದೊಡ್ಡ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಹಣ ಹಾಕಲಿದೆ. ಕನ್ನಡ ಮತ್ತು ತೆಲುಗು ಚಿತ್ರೀಕರಣ ಮಾಡಿ, ಹಿಂದಿ ಮತ್ತು ತಮಿಳಿಗೆ ಚಿತ್ರ ಡಬ್ ಆಗಲಿದೆ.
ಯಶ್ ಹಾಗೂ ಪೂರಿ ಜಗನ್ನಾಥ್ ನಡುವಿನ ಮಾತುಕತೆ ಯಶಸ್ವಿ ಆದರೂ, ಸಿನಿಮಾ ಈ ವರ್ಷ ಪ್ರಾರಂಭ ಆಗುವುದು ಅನುಮಾನ. ಸದ್ಯ, ಯಶ್ 'ಕೆಜಿಎಫ್ 2' ಸಿನಿಮಾದಲ್ಲಿ ತೊಡಗಿದ್ದಾರೆ. 'ಇಸ್ಮಾರ್ಟ್ ಶಂಕರ್' ಸಿನಿಮಾದ ಸಕ್ಸಸ್ ನಲ್ಲಿರುವ ಪೂರಿ ಜಗನ್ನಾಥ್ 'ಡಬಲ್ ಇಸ್ಮಾರ್ಟ್' ಸಿನಿಮಾ ಮಾಡುವ ಯೋಚನೆ ಮಾಡಿದ್ದಾರೆ. ಆ ಸಿನಿಮಾಗಳ ಬಳಿಕ ಜನಗಣಮನ ಆರಂಭವಾಗಲಿದೆ.
SCROLL FOR NEXT