ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಸೋಮವಾರ ಬೆಳಿಗ್ಗೆ ನಿಧನರಾಗಿದ್ದು ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಖ್ಯಾತನಾಮರು ಕಂಬನಿ ಮಿಡಿದಿದ್ದಾರೆ.
"ಕಾರ್ನಾಡ್ ಅಗಲಿಕೆಯಿಂದ ಚಲನ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು." ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ ಸಂತಾಪ ಹೇಳಿದ್ದಾರೆ. "ನನ್ನ ಪುತ್ರ ವಿಜಯ ರಾಘವೇಂದ್ರ ಅಭಿನಯದ "ಗಾನಯೋಗಿ ಪಂಚಾಕ್ಷರಿ ಗವಾಯಿ" ಚಿತ್ರದಲ್ಲಿ ಅವರು ಅಭಿನಯಿಸಿದ್ದರು.ಆಗ ಅವರೊಡನೆ ಕಳೆದ ಮೂರು ದಿನಗಳಲ್ಲಿ ಬಹಳಷ್ಟು ಕಲಿತಿದ್ದೇನೆ" ಅವರು ಸ್ಮರಿಸಿದ್ದರು.
ಕಾರ್ನಾಡ್ ಚಿತ್ರ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ', 'ಗೋದೋಳಿ' ಚಿತ್ರದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹಿರಿಯ ನಿರ್ದೇಶಕ ನಾಗಾಭರಣ ಮಾತನಾಡಿ "ಅವರೊಬ್ಬ ಅದ್ಭುತ ಗುರುವಾಗಿದ್ದರು. ಎಡಿಟಿಂಗ್ ಬಗೆಗೆ ನಾನು ಮೊದಲು ಕಲಿತದ್ದು ಅವರ ಜತೆಗಿದ್ದಾಗ."ಆನ್ವೇಷಣೆ", ""ನೆನಪಿನ ದೋಣಿ", "ಮೈಸೂರು ಮಲ್ಲಿಗೆ" ಚಿತ್ರಗಳಲ್ಲಿ ನಾನು ಅವರಿಗೆ ಆಕ್ಷನ್ ಕಟ್ ಹೇಳುವುದಕ್ಕೆ ಅವಕಾಶ ದೊರಕಿತ್ತು. ಅವರೇ ಕಲಿಸಿದ್ದನ್ನು ನಾನು ಅವರ ಮೇಲೆ ಪ್ರಯೋಗಿಸಿದ್ದೆ" ನಾಗಾಭರಣ ಹೇಳಿದ್ದಾರೆ.
"ಶಂಕರ್ ನಾಗ್ ನನ್ನು ಸಿನಿಮಾಗೆ ಕರೆತಂದದ್ದೇ ಗಿರೀಶ್ ಕಾರ್ನಾಡ್, ಅವರ ಆರೋಗ್ಯ ಸರಿಯಿಲ್ಲ ಎಂದು ತಿಳಿದಿತ್ತು. ಅವರ ಅಗಲಿಕೆ ಬೇಸರ ತರಿಸಿದೆ" ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.
ನೀ ಬರೆದ ಕಾದಂಬರಿ ಚಿತ್ರದಲ್ಲಿನ ಗಿರೀಶ್ ಕಾರ್ನಾಡ್ ಪಾತ್ರ ನೋಡಿ ನಾನು ನನ್ನ ಮಾವನನ್ನು ಹದಿನಾಲ್ಕು ವರ್ಷ ಮಾತಾಡಿಸಿರಲಿಲ್ಲ ಎಂದು ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.
ರಣವಿಕ್ರಮ ಮತ್ತು ಯಾರೆ ಕೂಗಾಡಲಿ ಹೀಗೆ ಎರಡು ಚಿತ್ರಗಳಲ್ಲಿ ಕಾರ್ನಾಡ್ ಜತೆಗೆ ನಾನು ಅಭಿನಯಿಸಿದ್ದೆ. ಸಾಹಿತ್ಯ ಲೋಕ, ರಂಗಭೂಮಿಗೆ ಅವರ ಕೊಡುಗೆ ದೊಡ್ದದು ಎಂದು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.
ಕಾರ್ನಾಡ್ ಅವರು ಎಂತಹ ಕ್ಲಿಷ್ಟವಾದ ಪಾತ್ರಗಳನ್ನು ಲೀಲಾಜಾಲವಾಗಿ ನಟಿಸಬಲ್ಲವರಾಗಿದ್ದರು.ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟ ತಂದಿದೆ.ಅವರು ಭಾಷೆಯಲ್ಲಿ ಹಿಡಿತ ಹೊಂದಿದ್ದರು. ಎಕೆ-47, ಜನುಮದಾತ ಎರಡು ಚಿತ್ರದಲ್ಲಿ ಅವಒಡನೆ ನಟಿಸುವ ಭಾಗ್ಯ ನನ್ನದಾಗಿತ್ತು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಕಾರ್ನಾಡ್ ನಿಧನಕ್ಕೆ ಕಂಬನಿ ಮಿಡಿದಿದ್ದು ಸಾಹಿತ್ಯ, ಚಿತ್ರರಂಗಕ್ಕೆ ಅವರ ಸಾವು ತುಂಬಲಾಗದ ನಷ್ಟ ತಂದಿದೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos