ಬೆಂಗಳೂರು: ಟಿ ಪಿ ಕೈಲಾಸಂ ಅವರ ಟೊಳ್ಳು-ಗಟ್ಟಿ ಕಥೆಯನ್ನೇ ಆಧಾರವಾಗಿಟ್ಟುಕೊಂಡು ತಾರತಮ್ಯ ಭಾವನೆಗಳು ಬೀರುವ ಪ್ರಭಾವವನ್ನು ಬಿಂಬಿಸುವ ‘ಮೂಕ ವಿಸ್ಮಿತ’ ಇದೇ ಶುಕ್ರವಾರ ತೆರೆಕಾಣಲಿದೆ.
ಈಗಾಗಲೇ ಪೋಸ್ಟರ್ ಗಳ ಮೂಲಕವೇ ‘ಯಾವುದೀ ಚಿತ್ರ’ ಎಂದು ಹುಬ್ಬೇರಿಸುವಂತೆ ಮಾಡಿರುವ ಚಿತ್ರವನ್ನು ಗುರುದತ್ ಶ್ರೀಕಾಂತ್ ನಿರ್ದೇಶಿಸಿದ್ದಾರೆ. ಸಂದೀಪ್ ಮಲಾನಿ, ವಾಣಿಶ್ರೀ ಭಟ್, ಚಂದ್ರಕೀರ್ತಿ, ಮಾವಳ್ಳಿ ಕಾರ್ತಿಕ್, ಶುಭರಕ್ಷಾ, ಕೃಪಾ, ಪುಷ್ಪ ರಾಘವೇಂದ್ರ, ಪ್ರಹ್ಲಾದ್ ಹಾಗೂ ರಾಜೇಶ್ ರಾವ್ ಕಾಣಿಸಿಕೊಂಡಿದ್ದಾರೆ.
“ಮೂಕ ವಿಸ್ಮಿತ 1950 ಹಾಗೂ ಇಂದಿನ ದಿನಮಾನದ ಪರಿಸ್ಥಿತಿಯನ್ನು ಸಮೀಕರಿಸಿಕೊಂಡಿದೆ. ಎರಡು ಆಯಾಮಗಳ ಹಲವು ಚಿತ್ರಗಳು ಈಗಾಗಲೇ ಚಂದನವನದ ಬೆಳ್ಳಿತೆರೆಯ ಮೇಲೆ ಕಂಡಿದ್ದರೂ,ನಮ್ಮ ಚಿತ್ರ ಪ್ರೇಕ್ಷಕನಿಗೆ ವಿಶಿಷ್ಟ ನಿರೂಪಣೆಯೊಂದಿಗೆ ಹೊಸತನದ ಅನುಭವ ನೀಡುತ್ತದೆ”ಎಂದು ಗುರುದತ್ ಕಾರ್ತಿಕ್ ಹೇಳಿಕೊಂಡಿದ್ದಾರೆ.
ಚಿತ್ರಕ್ಕೆ ಸಿದ್ದು ಜಿ.ಎಸ್ ಕ್ಯಾಮರಾ ವರ್ಕ್ ಮಾಡಿದ್ದರೆ, ಚಿನ್ಮಯ್ ಡಿ.ರಾವ್ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಗುರುದತ್ ಶ್ರೀಕಾಂತ್ ಈ ಸಿನಿಮಾಗಾಗಿ ಬರೋಬ್ಬರಿ 2ವರ್ಷಗಳ ಕಾಲ ಶ್ರಮಿಸಿದ್ದಾರಂತೆ. ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ನೀಡಿರುವುದು ತಂಡದ ಹುರುಪು ಹೆಚ್ಚಿಸಿದೆ.
ಶ್ರೀರಾಮನ ಮಹಿಮೆ ಸಾರುವ ಹಾಡು. . .
ಸಂದೀಪ್ ಮಲಾನಿ ಈ ಚಿತ್ರದಲ್ಲಿ ತಮಗೆ ದೊರಕಿರುವ ಪಾತ್ರದ ಬಗ್ಗೆ ಸಖತ್ ಖುಷಿಯಾಗಿದ್ದಾರೆ. “ಶ್ರೀರಾಮನ ಮಹಿಮೆ ಸಾರುವ ಅದ್ಭುತ ಗೀತೆಯೊಂದಿಗೆ ನನ್ನ ಪಾಲಿನ ಚಿತ್ರೀಕರಣ ಆರಂಭವಾಯಿತು ನಿರ್ದೇಶಕ ಗುರುದತ್ ಕಾರ್ತಿಕ್ ಅವರೇ ಈ ಗೀತೆ ರಚಿಸಿರುವುದು ಮತ್ತೊಂದು ವಿಶೇಷ. ಕ್ಷಣ ಚಿತ್ತ, ಕ್ಷಣಪಿತ್ತ ಎಂಬಂತೆ ಸದಾ ರೇಗಾಡುವ, ಹಾರಾಡುವ, ಕೂಗಾಡುವ ಪಾತ್ರಕ್ಕೆ ಜೀವ ತುಂಬಲು ಯತ್ನಿಸಿರುವೆ” ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿ ಏನನ್ನಾದರೂ ಸಾಧಿಸಲೇಬೇಕು ಎಂಬ ಮಹದಾಸೆಯೊಂದಿಗೆ ಜೈ ಗುರು ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ಇದೇ 17ರಂದು ತೆರೆ ಕಾಣಲಿದ್ದು, ಪ್ರೇಕ್ಷಕರನ್ನು ಹೇಗೆ ಮೂಕವಿಸ್ಮಿತರನ್ನಾಗಿಸಿದೆ ಎಂಬುದನ್ನು ಕಾದುನೋಡಬೇಕಿದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos