ಬೆಂಗಳೂರು: ದಿವಂಗತ ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’ ಚಿತ್ರ ಇದೇ 31ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಅಷ್ಟೇ ಅಲ್ಲದೆ ಸುಮಲತಾ ಅಂಬರೀಶ್ ಅಗ್ನಿಪರೀಕ್ಷೆಯ ಫಲಿತಾಂಶ ಮೇ 23ಕ್ಕೆ ಪ್ರಕಟವಾಗಲಿದೆ. ಅಲ್ಲದೆ ಮೇ 29ರಂದು ಅಂಬರೀಶ್ ಜನ್ಮದಿನ ಹೀಗಾಗಿ 23ರಿಂದ 31ರ ವರೆಗೂ ರೆಬೆಲ್ ಸಪ್ತಾಹ ಎನ್ನಬಹದು.
ಈ ಬಗ್ಗೆ ಮಾತನಾಡಿರುವ ನಟ ಅಭಿಷೇಕ್, “ಅಪ್ಪ ಮೆಚ್ಚಿಕೊಂಡು ಓಕೆ ಹೇಳಿದ್ದ ಚಿತ್ರ ‘ಅಮರ್’ 31ರಂದು ತೆರೆ ಕಾಣುತ್ತಿದೆ. ಅದಕ್ಕೂ ಮುನ್ನ ಮೇ 23 ಲೋಕಸಭಾ ಚುನಾವಣೆ ರಿಸಲ್ಟ್. 24ರಂದು ಅಮ್ಮ ಪ್ರಮುಖ ಪಾತ್ರದಲ್ಲಿರುವ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರ ಬಿಡುಗಡೆಯಾಗಲಿದೆ. 29ರಂದು ಅಪ್ಪನ ಜನ್ಮದಿನ. ಜೊತೆಗೆ 38 ವರ್ಷಗಳ ನಂತರ `ಅಂತ’ ಚಿತ್ರ ಮರುಬಿಡುಗಡೆಯಾಗುತ್ತಿದೆ” ಎಂದು ಹೇಳಿದ್ದಾರೆ.
“ಅಂಬರೀಶ್ ಮಗ ಹೇಗೆ ಅಭಿನಯಿಸುತ್ತಾನೋ ಎಂದು ಜನರು ನಿರೀಕ್ಷಿಸುತ್ತಿರುತ್ತಾರೆ. ಇದರಿಂದ ಒಂದು ಬಗೆಯ ಟೆನ್ಶನ್ ಆದರೂ ಸಹ ಅದರಿಂದ ಹೊರಬಂದು, ಪಾತ್ರಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅಭಿನಯಿಸಿರುವೆ. ನಿರ್ದೇಶಕ ನಾಗಶೇಖರ್ ಸಹಕಾರ, ನಟ ದರ್ಶನ್ ಸಲಹೆ ಪ್ಲಸ್ ಪಾಯಿಂಟ್” ಆಯಿತು ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ.