ಮುಂಬೈ: ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಿತ ಟ್ವೀಟ್ ಅನ್ನು ಶೇರ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೆರಾಯ್ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದು, ಅದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿವೇಕ್ ಒಬೆರಾಯ್, ನನ್ನ ಟ್ವೀಟ್ ನಲ್ಲಿ ಯಾವುದೇ ರೀತಿಯ ಅಸಹ್ಯಕರ ಅಥವಾ ಅವಹೇಳನಕಾರಿ, ತಪ್ಪಾದ ಅಂಶವನ್ನು ನಾನು ಕಂಡಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಹೀಗಾಗಿ ಇಲ್ಲಿ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದಾರೆ.
'ಮೀಮ್ ನಲ್ಲಿರುವ ವ್ಯಕ್ತಿಗಳಿಗೇ ಈ ಬಗ್ಗೆ ಆಕ್ಷೇಪವಿಲ್ಲ. ಆದರೆ ಕೆಲವರು ಮಾತ್ರ ಇದರಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ. ಇವರೆಲ್ಲಾ ಕೆಲಸ ಮಾಡುವುದಿಲ್ಲ. ಇವರಿಗೆ ವಿವಾದಗಳನ್ನು ಸೃಷ್ಟಿಸುವುದೇ ಕೆಲಸವಾಗಿರುತ್ತದೆ. ಪಶ್ಚಿಮಬಂಗಾಳದ ದೀದಿ ಮೀಮ್ ಗಳನ್ನು ಶೇರ್ ಮಾಡಿದರೆ ಜೈಲಿಗೆ ಅಟ್ಟುತ್ತಿದ್ದಾರೆ. ಈಗ ಅದೇ ರೀತಿ ಇಲ್ಲೂ ಕೆಲ ಮಂದಿ ನನ್ನನ್ನೂ ಜೈಲಿಗೆ ಅಟ್ಟುವಂತೆ ಆಗ್ರಹಿಸುತ್ತಿದ್ದಾರೆ. ನನ್ನ ಚಿತ್ರ ನಿಲ್ಲಿಸಲಾಗದೇ ಅವರನ್ನು ಇದೀಗ ನನ್ನನ್ನೇ ಜೈಲಿಗೆ ಅಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.
ಕೆಲವರು ನನ್ನನ್ನು ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ. ಕ್ಷಮೆ ಕೇಳಲು ನನಗೆ ಯಾವುದೇ ರೀತಿಯ ಹಿಂಜರಿಕೆ ಇಲ್ಲ. ಆದರೆ ಮೊದಲು ನನ್ನ ಟ್ವೀಟ್ ನಲ್ಲಿ ತಪ್ಪಾದ ಅಂಶವೇನಿದೆ. ನಿಜಕ್ಕೂ ನನ್ನ ಟ್ವೀಟ್ ನಲ್ಲಿ ತಪ್ಪಿದ್ದರೆ ನಾನೇ ಖುದ್ಧು ಕ್ಷಮೆ ಕೇಳುತ್ತೇನೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಯಾರೋ ಆ ಮೀಮ್ ಟ್ವೀಟ್ ಮಾಡಿದ್ದರು. ಅದನ್ನು ಷೇರ್ ಮಾಡಿ ನಕ್ಕಿದ್ದೆ ಅಷ್ಟೇ.. ಎಂದು ಹೇಳಿದ್ದಾರೆ.
ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ನಿನ್ನೆ ಬಹಿರಂಗವಾಗಿದ್ದ ಚುನಾವಣೋತ್ತರ ಸಮೀಕ್ಷೆಗಳ ವರದಿ ಬಹಿರಂಗವಾದ ಬೆನ್ನಲ್ಲೇ ಪವನ್ ಸಿಂಗ್ ಎಂಬ ಟ್ವಿಟರ್ ಖಾತೆದಾರರು ಐಶ್ವರ್ಯಾ ರೈ ಬಚ್ಚನ್ ಅವರ ಈ ಹಿಂದಿನ ಸಂಬಂಧಗಳನ್ನು ಹಾಲಿ ರಾಜಕೀಯ ಪರಿಸ್ಥಿತಿಗಳಿಗೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದರು. ಇದೇ ಫೋಟೋವನ್ನು ನಟ ವಿವೇಕ್ ಒಬೆರಾಯ್ ಕೂಡ ಟ್ವೀಟ್ ಮಾಡಿ.. ರಾಜಕೀಯ ಏನೂ ಇಲ್ಲ.. ಕೇವಲ ಜೀವನ... ಎಂದು ರಿಟ್ವೀಟ್ ಮಾಡಿದ್ದರು.
ವಿವೇಕ್ ಒಬೆರಾಯ್ ಅವರ ಈ ಟ್ವೀಟ್ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ರಾಜಕೀಯಕ್ಕಾಗಿ ಮಹಿಳೆಯೊಬ್ಬಳ ಖಾಸಗಿ ವಿಚಾರವನ್ನು ಸಾಮಾಜಿಕ ವೇದಿಕೆ ಮೇಲೆ ತಂದಿಟ್ಟ ವಿವೇಕ್ ಒಬೆರಾಯ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ನಟ ವಿವೇಕ್ ಒಬೆರಾಯ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos