ಸಿನಿಮಾ ಸುದ್ದಿ

ಸ್ಯಾಂಡಲ್'ವುಡ್ ನನ್ನ ತವರು, ನಾನು ಇಲ್ಲಿಗೆ ಸೇರಿದವಳು: ನಿಧಿ ಸುಬ್ಬಯ್ಯ

Manjula VN

ಪಂಚರಂಗಿ ಚೆಲವು, ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಅವರು ಸ್ಯಾಂಡಲ್'ವುಡ್'ಗೆ ಮತ್ತೆ ಹಿಂತಿರುಗಿದ್ದಾರೆ. 3 ವರ್ಷಗಳ ಅಂತರದ ಬಳಿಕ ಶಿವರಾಜ್ ಕುಮಾರ್ ಅಭಿನಯದ 'ಆಯುಷ್ಮಾನ್ ಭವ' ಚಿತ್ರದ ಮೂಲಕ ಜನರನ್ನು ಮನರಂಜಿಸಲು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 

ಸ್ಯಾಂಡಲ್ವುಡ್ ನಿಂದ 3 ವರ್ಷಗಳ ಕಾಲ ದೂರವಿದ್ದ ನಿಧಿ ಅವರು ಹಿಂದಿಯಲ್ಲಿ ಓಹ್ ಮೈ ಗಾಡ್, ಅಜ್ ಗಜಬ್ ಲವ್, ಡೈರೆಕ್ಟ್ ಇಷ್ಕ್, ಲವ್ ಶಗುನ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಮೂರು ವರ್ಷಗಳ ಅಂತರ ಹಾಗೂ ಬಾಲಿವುಡ್ ಜರ್ನಿ ಕುರಿತು ನಿಧಿ ಸುಬ್ಬಯ್ಯ ಅವರು ಮಾತನಾಡಿದ್ದು ಹೀಗಿದೆ. 

ಆಯುಷ್ಮಾನ್ ಭವಕ್ಕಾಗಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದೇನೆ. ನಾನು ಇಲ್ಲಿಗೆ ಸೇರಿದವಳು ಎಂಬುದು ಎಲ್ಲರಿಗೂ ಗೊತ್ತಿದೆ. ಜನರ ಕಣ್ಣಿಗೆ ಬೀಳದ ಕಾರಣ ನಾನು ಕನ್ನಡ ಚಿತ್ರದಲ್ಲಿಯೇ ಅಭಿನಯಿಸುವುದಿಲ್ಲ ಎಂಬಂತ ವಾತಾವರಣ ಸೃಷ್ಟಿಯಾಗಿದೆ. ಇದು ಸರಿಯಲ್ಲ. ಕನ್ನಡ ಚಿತ್ರದಲ್ಲಿ ಮತ್ತಷ್ಟು ಸಿನಿಮಾ ಮಾಡುವ ಆಲೋಚನೆಗಳಿವೆ ಎಂದು ನಿಧಿ ಸುಬ್ಬಯ್ಯ ಹೇಳಿದ್ದಾರೆ. 
 
ಆಯುಷ್ಮಾನ್ ಭವ ಚಿತ್ರ ಮ್ಯೂಸಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ನನ್ನದು ಅತ್ಯಂತ ಮೋಹಕವಾದ ಆಧುನಿಕ ಹಳ್ಳಿ ಹುಡುಗಿಯ ಪಾತ್ರ ನನ್ನದು. ಚಿಕ್ಕ ಪಾತ್ರವಾಗಿದ್ದರೂ, ಆ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಿರ್ದೇಶಕ ಪಿ.ವಾಸು ಅವರ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಗೂ ಹೇಗೆಲ್ಲ ಮಹತ್ವ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಜೊತೆಗೆ ಚಿತ್ರ ಶಿವರಾಜ್ ಕುಮಾರ್ ಅಭಿನಯದ ಚಿತ್ರ. ಅವರ ಜೊತೆಗೂ ಅಭಿನಯಿಸಬೇಕೆನ್ನುವ ನನ್ನ ಕನಸು ಈಡೇರಿದೆ. ಚಿತ್ರದಲ್ಲಿನ ನನ್ನ ಪಾತ್ರ ವಿಭಿನ್ನತೆಗೆ ಬೆಳಕು ಚೆಲ್ಲುತ್ತದೆ. ಈ ಹಿಂದೆಂದೂ ನೋಡಿರದ ಪಾತ್ರ ಇದಾಗಿದ್ದು, ಬಹಳ ಸಂತೋಷವಿದೆ ಎಂದು ತಿಳಿಸಿದ್ದಾರೆ. 

ಚಿತ್ರಕ್ಕೆ ತಮ್ಮ ಎಂಟ್ರಿ ಕುರಿತು ಮಾತನಾಡಿದ ಅವರು, ನಿರ್ಮಾಪಕ ಯೋಗಿ ದ್ವಾರಕೀಶ್ ಹಾಗೂ ನಾನು ಉತ್ತಮ ಸ್ನೇಹಿತರು. ಮುಂಬೈನಲ್ಲಿ ಇಬ್ಬರು ಎದುರಾಗಿದ್ದೆವು. ಈ ವೇಳೆ ಅವರು ಕನ್ನಡ ಚಿತ್ರ ಮಾಡುವಲ್ಲಿ ಆಸಕ್ತಿ ಇದೆಯೇ ಎಂಬು ಕೇಳಿದರು. ಆಸಕ್ತಿದಾಯಕ ಪಾತ್ರವಿದ್ದರೆ, ಖಂಡಿತ ಅಭಿನಯಿಸುತ್ತೇನೆಂದು ಹೇಳಿದ್ದೆ. ಇದರಂತೆ ಆಯುಷ್ಮಾನ್ ಭವದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. 

ಯೋಗರಾಜ್ ಭಟ್ ಜೊತೆಗೆ ಮತ್ತೆ ಸಿನಿಮಾ ಮಾಡಬೇಕೆಂಬ ಆಸೆಯಿದೆ. ಮತ್ತೆ ಪಂಚರಂಗಿ 2 ಚಿತ್ರ ಬಂದರೂ ಬರಬಹುದು. ಸೂರಿ ತಂಡದೊಂದಿಗೆ ಕೆಲಸ ಮಾಡುವ ಆಸೆಯೂ ಇದೆ ಎಂದಿದ್ದಾರೆ. 

SCROLL FOR NEXT