ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಿಂದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ತುಳು ಹಾಸ್ಯಮಯ “ಗಿರ್ಗಿಟ್” ಚಿತ್ರಕ್ಕೆ ಮಂಗಳೂರು ನ್ಯಾಯಾಲಯ ಗುರುವಾರ ತಡೆಯಾಜ್ಞೆ ನೀಡಿದೆ.
ಚಿತ್ರದಲ್ಲಿನ ನ್ಯಾಯಾಲಯದ ದೃಶ್ಯವೊಂದರಲ್ಲಿ ನಟ ಅರವಿಂದ ಬೋಳಾರ್ ವಕೀಲರ ಪಾತ್ರ ನಿರ್ವಹಿಸಿದ್ದು, ಅದರಲ್ಲಿ ಐಪಿಸಿ ಸೆಕ್ಷನ್, ನ್ಯಾಯಧೀಶರನ್ನು ಹಾಗೂ ನ್ಯಾಯಾಲಯವನ್ನು ಅಣಕಿಸಿದ ಮತ್ತು ವಕೀಲರ ವೃತ್ತಿಯನ್ನು ಹಾಸ್ಯಮಯವಾಗಿ ತೋರಿಸಿದ್ದಾರೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘ ನ್ಯಾಯಾಲಯ ಮೆಟ್ಟಿಲೇರಿತ್ತು.
ಈ ಕುರಿತು ವಾದ ಆಲಿಸಿದ ಮಂಗಳೂರು ಕಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹರೀಶ್, ತಕ್ಷಣದಿಂದ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ
ಈ ಕುರಿತಂತೆ ಮಾತನಾಡಿರುವ ನಿರ್ದೇಶಕ, ನಟ ರೂಪೇಶ್ ನ್ಯಾಯಾಲಯದ ಆದೇಶದಿಂದ ಬೇಸರವಾಗಿದೆ. ನಾವು ಅಪರಾಧ ಮಾಡಿಲ್ಲ. ವಕೀಲರೊಬ್ಬರ ಬೇಜವಾಬ್ದಾರಿಯನ್ನು ತಿಳಿಹಾಸ್ಯದ ಮೂಲಕ ತೋರಿಸುವ ಯತ್ನ ಮಾಡಿದ್ದೇವೆ. ಸೆನ್ಸಾರ್ ಮಂಡಳಿ ಸಹ ಚಿತ್ರಕ್ಕೆ 'ಯು' ಪ್ರಮಾಣಪತ್ರ ನೀಡಿದೆ ಎಂದಿದ್ದಾರೆ.
ಇದೀಗ ತುಳು ಚಿತ್ರಕ್ಕೆ ತಡೆಯಾಜ್ಞೆ ನೀಡಿರುವ ವಿಚಾರ ಆಘಾತಕಾರಿಯಾಗಿದ್ದು ಚಿತ್ರದ ಒಂದು ದೃಶ್ಯದಲ್ಲಿ ವಕೀಲರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎನ್ನುವುದನ್ನೇ ಕಾರಣವಾಗಿಟ್ಟು ಇಡೀ ಚಿತ್ರ ಪ್ರದರ್ಶನ ತಡೆಯಾಜ್ಞೆ ತರುವುದು ಒಳಿತಲ್ಲ. ತಡೆಯಾಜ್ಞೆ ಹಿಂಪಡೆಯಬೇಕು ಎಂದು ತುಳು ಕಲಾವಿದರ ಒಕ್ಕೂಟ ಮನವಿ ಮಾಡಿದೆ.