ಸಿನಿಮಾ ಸುದ್ದಿ

ಅನಾರೋಗ್ಯ: ದೃಶ್ಯಂ ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ಸ್ಥಿತಿ ಗಂಭೀರ-ಆಸ್ಪತ್ರೆಯ ಮೂಲಗಳು

Manjula VN

ಮುಂಬೈ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬಾಲಿವುಡ್'ನ ದೃಶ್ಯಂ ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ. 

ಯಕೃತ್ತಿನ ಸಮಸ್ಯೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದ ನಿಶಿಕಾಂತ್ ಅವರು, ಅನಾರೋಗ್ಯ ಹೆಚ್ಚಾದ ಕಾರಣ ಜು.31ರಂದು ಹೈದರಾಬಾದ್'ನ ಎಐಜಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. 

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಿಶಿಕಾಂತ್ ಅವರು ಮೃತಪಟ್ಟಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿಶಿಕಾಂತ್ ಅವರ ಗೆಳೆಯ ಹಾಗೂ ನಿರ್ದೇಶಕ ಮಿಲ್ಪ್ ಝಾವೇರಿಯವರು, ನಿಶಿಕಾಂತ್ ಮೃತಪಟ್ಟಿಲ್ಲ. ವೈದ್ಯರು ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್‌) ಅಳವಡಿಸಿದ್ದಾರೆಂದು ಹೇಳಿದ್ದಾರೆ. 

ಮರಾಠಿ ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿಶಿಕಾಂತ್ ಅವರು, ಬಾಲಿವುಡ್‌ ಸಿನಿಮಾಗಳಿಂದ ಹೆಚ್ಚು ಖ್ಯಾತಿ ಪಡಿದಿದ್ದಾರೆ. 

2005ರಲ್ಲಿ ಮರಾಠಿಯ ‘ದೊಂಬಿವಾಲಿ ಫಾಸ್ಟ್‌’ ಸಿನಿಮಾದ ಮೂಲಕ ನಿರ್ದೇಶನದ ಹಾದಿ ಹಿಡಿದಿದ್ದರು. ಈ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು. 

2004ರ ‘ಹವಾ ಆನೆ ದೇ’ ಇವರ ನಟನೆಯ ಚೊಚ್ಚಲ ಸಿನಿಮಾವಾಗಿದೆ. 2008ರ ‘ಮುಂಬೈ ಮೇರಿ ಜಾನ್’ ಸಿನಿಮಾದ ಮೂಲಕ ನಟ–ನಿರ್ದೇಶಕನಾಗಿ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ’ದೊಂಬಿವಾಲಿ ಫಾಸ್ಟ್‌’, ‘ಮುಂಬೈ ಮೇರಿ ಜಾನ್‌’, ‘ರಾಕಿ ಹ್ಯಾಂಡ್‌ಸಮ್‌’, ‘ಫೋರ್ಸ್‌’, ‘ಮದಾರಿ’, ‘ದ್ರಶ್ಯಂ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

‘ಡ್ಯಾಡಿ’, ‘ರಾಕಿ ಹ್ಯಾಂಡ್‌ಸಮ್‌’, ‘ಜ್ಯೂಲಿ 2‘ ಹಾಗೂ ‘ಭಾವೇಶ್ ಜೋಶಿ’ ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯವನ್ನು ತೋರಿದ್ದರು ನಿಶಿಕಾಂತ್. ಸಿನಿಮಾಗಳಿಗೆ ಮಾತ್ರ ತಮ್ಮನ್ನು ಸೀಮಿತವಾಗಿರಿಸಿಕೊಳ್ಳದ ಇವರು ವೆಬ್‌ ಸರಣಿಗಳನ್ನು ನಿರ್ಮಾಣ ಮಾಡಿದ್ದರು. ’ದಿ ಫೈನಲ್ ಕಾಲ್’ ಹಾಗೂ ’ರಂಗ್‌ಬಾಝ್ ಫಿರ್‌ಸೇ’ ಇವರು ನಿರ್ಮಾಣ ಮಾಡಿದ ವೆಬ್‌ಸರಣಿಗಳಾಗಿವೆ.

SCROLL FOR NEXT