ಸಿನಿಮಾ ಸುದ್ದಿ

ಡಿ ಬಾಸ್ ಅಭಿಮಾನಿಗಳಿಗೆ ಮುನಿರತ್ನ ಸರ್ ಪ್ರೈಸ್: ವಿಂಗ್ ಕಮಾಂಡರ್ ಅಭಿನಂದನ್ ಪಾತ್ರಕ್ಕೆ ದರ್ಶನ್

Shilpa D

ಬೆಂಗಳೂರು: ಉರಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದಂತೆ ಕನ್ನಡದಲ್ಲೂ ಹೊಸ ಪ್ರಯತ್ನಕ್ಕೆ ನಿರ್ಮಾಪಕ ಮುನಿರತ್ನ ಕೈ ಹಾಕಿದ್ದಾರೆ.

ತಮ್ಮ ನಿರ್ಮಾಣದ ಮುಂದಿನ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ಅವರು ವಿಂಗ್ ಕಮಾಂಡರ್ ಅಭಿನಂದನ್ ಪಾತ್ರ ಮಾಡಲಿದ್ದಾರೆ ಎಂದು  ಮುನಿರತ್ನ ತಿಳಿಸಿದ್ದಾರೆ.

ನಗರದ ಮತ್ತಿಕೆರೆಯ ಜೆ.ಪಿ.ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಮುನಿರತ್ನ ಕುರುಕ್ಷೇತ್ರ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಸುಳಿವು ನೀಡಿದರು. ದರ್ಶನ್ ಅವರಲ್ಲಿ ಈಗ ತಾನೇ ಮಾತನಾಡಿದ್ದೇನೆ. ಪೌರಾಣಿಕ, ಸಾಮಾಜಿಕ ಸೇರಿದಂತೆ ಅವರು ಎಲ್ಲ ತರಹದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರನ್ನೊಬ್ಬ ಸೈನಿಕನನ್ನಾಗಿ ನೋಡಬೇಕೆಂಬ ಆಸೆ ಇದೆ.

ಕಳೆದ ವರ್ಷ ಪುಲ್ವಾಮ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ವೇಳೆ ನೆರೆಯ ದೇಶಕ್ಕೆ ತೆರಳಿ ಸೆರೆ ಸಿಕ್ಕ ಬಳಿಕ ಭಾರತಕ್ಕೆ ಮರಳಿದ ಧೀರ ಸೈನಿಕ ಅಭಿನಂದನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಈ ಚಿತ್ರ ಅಭಿನಂದನ್ ಜೀವನಾಧಾರಿತವೋ ಅಲ್ಲ ಪ್ರೇರಣೆಯಿಂದ ನಿರ್ಮಿಸುತ್ತಿರುವುದೋ ಎಂದು ಮುಂದಿನ ದಿನಗಳಲ್ಲಿ ತಿಳಿಸಲಿದ್ದೇನೆ. ಆದರೆ ಈ ಚಿತ್ರದಲ್ಲಿ ದರ್ಶನ್ ಅವರ ಪಾತ್ರದ ಹೆಸರು ಮಾತ್ರ ವಿಂಗ್ ಕಮಾಂಡರ್ ಅಭಿನಂದನ್ ಎಂದೇ ಇರುತ್ತದೆ. ಜೊತೆಗೆ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ವರ್ಷ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರಂತೆ. ಅಂತೂ ಕನ್ನಡದಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಜೀವನಾಧಾರಿತ ಚಿತ್ರ ನಿರ್ಮಾಣವಾಗುವುದು ಖಾತ್ರಿಯಾಗಿದೆ. ಪ್ಯಾನ್‌ ಇಂಡಿಯಾ ಕಾನ್ಸೆಫ್ಟ್‌ನಡಿ ಈ ಸಿನಿಮಾ ನಿರ್ಮಾಣವಾಗಲಿದೆಯೇ ಎಂಬುದು ಅಧಿಕೃತಗೊಂಡಿಲ್ಲ.

SCROLL FOR NEXT