

ಬೆಂಗಳೂರು: ‘ಎಬೋಲಾ’ ಮಹಾಮಾರಿ ಬೆಂಗಳೂರಿಗೂ ಕಾಲಿಟ್ಟಿದೆಯೇ ಎಂಬ ಆತಂಕ ಶುರುವಾಗಿದೆ. ಉಗಾಂಡಾದಿಂದ ಬಂದಿದ್ದ ಮಹಿಳೆಯಲ್ಲಿ ಎಬೋಲಾ ಸೋಂಕಿನ ಲಕ್ಷಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಂಡಿದ್ದು, ಆಕೆಯನ್ನು ಪ್ರತ್ಯೇಕ ವಾರ್ಡ್ಗೆ ದಾಖಲಿಸಿ ಕಟ್ಟುನಿಟ್ಟಿನ ವೈದ್ಯಕೀಯ ನಿಗಾದಲ್ಲಿ ಇರಿಸಿದೆ.
ಮಹಿಳೆಯಲ್ಲಿ ಎಬೋಲಾ ವೈರಸ್ಗೆ ಹೋಲುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆಕೆಯನ್ನು ತಕ್ಷಣವೇ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು. ಸೋಂಕು ದೃಢೀಕರಣಕ್ಕಾಗಿ ರಕ್ತದ ಮಾದರಿಗಳನ್ನು ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿ ಬರುವವರೆಗೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿ ಮಹಿಳೆಯ ಸಂಪರ್ಕಕ್ಕೆ ಬಂದವರ ಮೇಲೂ ನಿಗಾ ಇಟ್ಟಿದೆ.
ಮಹಿಳೆಯನ್ನು ಉಗಾಂಡಾದ ರಾಜಧಾನಿ ಕ್ಯಾಂಪಾಲಾ ನಿವಾಸಿ ನಗಿರೆ ಲತೀಫಾ ಎಂದು ಗುರುತಿಸಲಾಗಿದೆ. ಅವರು ಮೇ 23ರಂದು ಬೆಂಗಳೂರಿಗೆ ಆಗಮಿಸಿ ನಗರದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.
ಮಹಿಳೆಯಲ್ಲಿ ಎಬೋಲಾ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಅವರನ್ನು ಆಂಬ್ಯುಲೆನ್ಸ್ ಮೂಲಕ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ (Epidemic Diseases Hospital) ಸ್ಥಳಾಂತರಿಸಿದರು. ಪ್ರಸ್ತುತ ಅವರನ್ನು ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಹಾಗೂ ವೈದ್ಯಕೀಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
21 ದಿನಗಳ ನಿಗಾ ಕಡ್ಡಾಯ
ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಉಗಾಂಡಾ ಹಾಗೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಸೇರಿದಂತೆ ಎಬೋಲಾ ಅಪಾಯ ಇರುವ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರನ್ನು 21 ದಿನಗಳ ಕಾಲ ಆರೋಗ್ಯ ನಿಗಾದಲ್ಲಿಡಲಾಗುತ್ತದೆ.
ರಕ್ತದ ಮಾದರಿ ಪುಣೆಗೆ ರವಾನೆ
ಮೇ 25ರಂದು ಮಹಿಳೆಯ ರಕ್ತ ಹಾಗೂ ಇತರ ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಘಟಕದ ಮೂಲಕ ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಪರೀಕ್ಷಾ ವರದಿ ಬುಧವಾರ ಲಭ್ಯವಾಗುವ ನಿರೀಕ್ಷೆಯಿದ್ದು, ವರದಿ ಬಂದ ಬಳಿಕ ಸೋಂಕು ದೃಢಪಟ್ಟಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ.
ಸಂಪರ್ಕದಲ್ಲಿದ್ದವರ ಮೇಲೂ ನಿಗಾ
ಮಹಿಳೆ ಬೆಂಗಳೂರಿಗೆ ಬಂದ ನಂತರ ಸಂಪರ್ಕಕ್ಕೆ ಬಂದಿರಬಹುದಾದ ವ್ಯಕ್ತಿಗಳನ್ನು ಗುರುತಿಸಿ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಂಪರ್ಕಿತರ ಆರೋಗ್ಯ ಸ್ಥಿತಿಯನ್ನೂ ಪರಿಶೀಲಿಸಲಾಗುತ್ತಿದೆ.
ಆತಂಕ ಬೇಡ ಎಂದ ಆರೋಗ್ಯ ಇಲಾಖೆ
ಇದೀಗ ಸೋಂಕು ಕೇವಲ ಶಂಕಿತ ಹಂತದಲ್ಲಿದ್ದು, ಪರೀಕ್ಷಾ ವರದಿ ಬರುವವರೆಗೆ ಎಬೋಲಾ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
Advertisement