ಸಿನಿಮಾ ಸುದ್ದಿ

ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್: ತುಮಕೂರಿನ ಅಂಧ ಸೋದರಿಯರಿಗೆ ಮನೆ ರೆಡಿ!

Raghavendra Adiga

ನವರಸನಾಯಕ ಜಗ್ಗೇಶ್ ತಾವು ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಂಡಿದ್ದಾರೆ. ಸರಿಗಮಪ ಸೀಜನ್ ಹದಿನೇಲರ ಸ್ಪರ್ಧಿಗಳಾಗಿದ್ದ ಅಂಧ ಸೋದರಿಯರಿಗೆ ಮನೆ ಕಟ್ಟಿಸಿಕೊಡುವ ಕಾರ್ಯ ಪೂರ್ಣವಾಗಿದೆ.

ಈ ಬಗೆಗೆ ಇನ್‍ಸ್ಟಾಗ್ರಾಂನಲ್ಲಿ  ವೀಡಿಯೋ ಹಾಗೂ ಸಂದೇಶವನ್ನು ಹಾಕಿಕೊಂಡಿರುವ ನಟ ಜಗ್ಗೇಶ್  ತಾವು ಪತ್ನಿ ಪರಿಮಳ ಜತೆಯಾಗಿ ರತ್ನಮ್ಮ ಹಾಗೂ ಮಂಜಮ್ಮ ಸೋದರಿಯರ ಮನೆ ಗೃಹಪ್ರವೇಶಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ಕೊರಟಗೆರೆ ಅಬಿಮಾನಿ ಸಂಘದವರಿಗೆ ತುಮಕೂರಿನ ಈ ಅಂಧ ಪ್ರತಿಭೆಗಳಿಗೆ ಮನೆ ಕಟ್ಟಿಸಿಕೊಡಲು ಜಗ್ಗೇಶ್ ಮನವಿ ಮಾಡಿದ್ದರು. ಇದಕ್ಕೆ ಪ್ರತಿಸ್ಪಂದಿಸಿದ ಸಂಘದ ರವಿ, ಮಲ್ಲಣ್ಣ ಮತ್ತು ಮಿತ್ರರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಬರುವ ಮಾರ್ಚ್ 12ರಂದು   ಮನೆ ಗೃಹಪ್ರವೇಶವಿದ್ದು ಇದಕ್ಕಾಗಿ ಜಗ್ಗೇಶ್ ಪತ್ನಿ ಸಮೇತ ತೆರಳುತ್ತಿದ್ದಾರೆ.

ಈ ನಡುವೆ ಅಭಿಮಾನಿಗಳು ಗೃಹ ಪ್ರವೇಶಕ್ಕೆ ಬರಲಿರುವ ಜಗ್ಗೇಶ್ ಮತ್ತು ಪರಿಮಳ ಅವರ ಹೆಸರಿನ ಬ್ಯಾನ ಹಾಕಿಸಿದ್ದು ಆ ವೀಡಿಯೋವನ್ನು ನಟ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

"ಅಂಧ ಪ್ರತಿಭೆಗಳಿಗಾಗಿ ನಿರ್ಮಿಸಿರುವ ನೂತನ ಗೃಹದ ಕೀಲಿ ಕೈಗೊಪ್ಪಿಸಲು ಮಾರ್ಚ್ 12ರಂದು ನಾನು ಮಡದಿ ಪರಿಮಳ ಹೋಗುತ್ತೇವೆ. ತಿಂಗಳಲ್ಲಿ ನನ್ನ ಭಾವನೆ ಕಾರ್ಯರೂಪಕ್ಕೆ ತಂದು ಮುಗಿಸಿದ ನನ್ನ ಆತ್ಮೀಯ ಕೊರಟಗೆರೆ ಅಬಿಮಾನಿ ಸಂಘದ ರವಿ, ಮಲ್ಲಣ್ಣ ಮತ್ತು ಮಿತ್ರರಿಗೆ ಧನ್ಯವಾದಗಳು. ನಿಮ್ಮ ಕಾರ್ಯ ರಾಯರ ಹೃದಯಕ್ಕೆ ಅರ್ಪಣೆ..Love you all” ಎಂದು ಸಹ ಬರೆದಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಲ್ಲಿ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಸೋದರಿಯರು ಆಯ್ಕೆಯಾಗಿದ್ದು ಈ ವೇಳೆ ಅವರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು.ಇದನ್ನು ಕೇಳಿದ್ದ ಜಗ್ಗೇಶ್ ಅವರಿಗೆ ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದರು.

SCROLL FOR NEXT