ಸಿನಿಮಾ ಸುದ್ದಿ

ಹುಟ್ಟುಹಬ್ಬ ನೆಪದಲ್ಲೂ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್!

Nagaraja AB

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಅದು ಸಿನಿಮಾದ ಶೀರ್ಷಿಕೆಯಿಂದ ಹಿಡಿದು, ಚಿತ್ರೀಕರಣ, ನಿರ್ಮಾಣ, ಬಜೆಟ್ , ಲೋಕೇಷನ್, ಹಾಡುಗಳು, ಪ್ರಚಾರ, ಬಿಡುಗಡೆ ಹೀಗೆ ಎಲ್ಲಾ ಹಂತಗಳಲ್ಲಿಯೂ ಸ್ಟಾರ್ ವಾರ್ ತಪ್ಪಿದಲ್ಲ.

ಇದೀಗ ಹುಟ್ಟುಹಬ್ಬ ನೆಪದಲ್ಲೂ ನೆಚ್ಚಿನ ನಾಯಕ ನಟರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ವಾರ್ ನಡೆಯುತ್ತಿದೆ.

ಹೌದು. ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್  ಅಭಿಮಾನಿಗಳು 216 ಅಡಿಯ ಕಟೌಟ್ ಹಾಗೂ 5 ಸಾವಿರ ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸುವ ಮೂಲಕ ವಿಶೇಷ ಅಭಿಮಾನ ಮೆರೆದಿದ್ದರು.

ಇದರಿಂದ ಸ್ಪೂರ್ತಿಗೊಂಡಿರುವ ಚಾಲೆಂಜಿಂಗ್ ಸ್ಟಾರ್ 'ಡಿ'ಬಾಸ್ ಅಭಿಮಾನಿಗಳು ತಾವೇನೂ ಕಮ್ಮಿ ಇಲ್ಲ ಎಂಬಂತೆ  ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವನ್ನು ಅದ್ದೂರಿ ಆಚರಿಸಲು ನಿರ್ಧರಿಸಿ ಭಾರಿ ಸಿದ್ದತೆಯಲ್ಲಿ ತೊಡಗಿದ್ದಾರೆ.

ಈ ಮಧ್ಯೆ ದರ್ಶನ್ ನೀಡಿರುವ ಹೇಳಿಕೆ ಅವರ ಅಭಿಮಾನಿಗಳಲ್ಲಿ ಶಾಕಿಂಗ್ ಮೂಡಿಸಿದೆ.  ಹುಟ್ಟುಹಬ್ಬಕ್ಕೆ ಹಾರ- ತುರಾಯಿ, ಬ್ಯಾನರ್, ಕೇಕ್  ಅಂತಾ ವೆಚ್ಚ ಮಾಡುವ ಬದಲು ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ - ದಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ.

ದಾಸನ ಈ ಕರೆಗೆ ಓಗೂಟ್ಟು ಅನೇಕ ಅಭಿಮಾನಿಗಳು ದವಸ- ದಾನ್ಯಗಳನ್ನು ರಾಶಿಗಟ್ಟಲೇ ತಂದು ದರ್ಶನ್ ಮನೆಯಲ್ಲಿ ಹಾಕುತ್ತಿದ್ದಾರೆ. ಆದಾಗ್ಯೂ, ಕೆಲ ಅಭಿಮಾನಿಗಳು ಅದ್ದೂರಿಯಾಗಿಯೇ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದಾರೆ.

ಇನ್ನೂ ಮಾರ್ಚ್ 17ಕ್ಕೆ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಿದ್ದು, ಎಂದಿನಂತೆ ಅವರ ಅಭಿಮಾನಿಗಳು ಕೂಡಾ ಜನ್ಮ ದಿನವನ್ನು ಆಚರಿಸಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ ಅವರ ಅಭಿಮಾನಿ ಬಳಗ ವೊಂದು ಪುನೀತ್ ನಡೆದು ಬಂದ ಹಾದಿಯನ್ನು ಕುರಿತ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ಅಜಾತ್ರ ಶತ್ರು ಎಂಬ ಹೆಸರಿನ ಈ ಕಿರುಚಿತ್ರವನ್ನು ಉಡುಗೊರೆಯಾಗಿ  ಜನ್ಮ ದಿನದಂದು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಿದ್ದಾರೆ.

ಈ ಮಧ್ಯೆ ಪೂರ್ಣಿಮಾ ರಾಮ್ ಕುಮಾರ್ ಅವರ ಪುತ್ರ ದೀರನ್ ರಾಮ್ ಕುಮಾರ್, ತಮ್ಮ ಫೇಸ್ ಬುಕ್  ಪೇಜ್ ನಲ್ಲಿ ಅಜಾತ ಶತ್ರು ಕಿರುಚಿತ್ರ ತಯಾರಿಸಿರುವ ಅಭಿಮಾನಿ ಬಳಗಕ್ಕೆ ಶುಭ ಕೋರಿದ್ದಾರೆ. ಇದರ ಜೊತೆಗೆ ಮೈಸೂರಿನ ಅಭಿಮಾನಿಗಳು ಕೂಡಾ ರಾಜರತ್ನ ಎಂಬ ಕಿರುಚಿತ್ರವನ್ನು ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ.

ಒಟ್ಟಾರೇ, ಕನ್ನಡ ಚಿತ್ರರಂಗ ನಾನಾ ಕಾರಣಗಳಿಂದ ಭಾರತೀಯ ಸಿನಿಮಾವನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿರುವಂತೆಯೇ ವಿವಿಧ ನೆಪಗಳಲ್ಲಿ ಸ್ಟಾರ್ ಗಳ ನಡುವಿನ ವಾರ್ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. 

SCROLL FOR NEXT