ಸಿನಿಮಾ ಸುದ್ದಿ

ವಾಸವಿರುವ ಅಪಾರ್ಟ್'ಮೆಂಟ್'ಗೇ ಸೆಕ್ಯೂರಿಟಿ ಗಾರ್ಡ್ ಆದ ಸ್ಯಾಂಡಲ್'ವುಡ್ ಖ್ಯಾತ ಪೋಷಕ ನಟ!

Manjula VN

ಬೆಂಗಳೂರು: ಕೊರೋನಾ ವೈರಸ್ ಸಾಕಷ್ಟು ವಲಯಗಳಿಗೆ ಸಮಸ್ಯೆಯನ್ನು ತಂದೊಡ್ಡಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ನಟ ಹಾಗೂ ನಟಿಯರೂ ಕೂಡ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಇದರಂತೆ ಕನ್ನಡ ಚಿತ್ರರಂಗ ಖ್ಯಾತ ಪೋಷಕರ ನಟರೊಬ್ಬರು ಒಳ್ಳೆಯ ಕಾಣರವೊಂದಕ್ಕೆ ತಮ್ಮದೇ ಅಪಾರ್ಟ್'ಮೆಂಟ್'ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ ಕಾರ್ಯನಿರ್ವಹಿಸುತ್ತಿದ್ದಾರೆ. 

ರಾಜ್ಯದಲ್ಲಿ ಈಗಾಗಲೇ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದರಂತೆ ನಟ ಶ್ರೀನಾಥ್ ವಸಿಷ್ಠ ಅವರು ನೆಲೆಯೂರಿರುವ ಅಪಾರ್ಟ್'ಮೆಂಟ್'ನ ಸೆಕ್ಯುರಿಟಿ ಗಾರ್ಡ್ ಕೂಡ ಕೊರೋನಾ ಸೋಂಕಿಗೊಳಗಾಗಿದ್ದು, ಇವರೊಂದಿಗೆ ಇನ್ನೂ ಮೂರು ಜನರು ಕ್ವಾರಂಟೈನ್'ಗೊಳಗಾಗಿದ್ದಾರೆ. 

ಹೀಗಾಗಿ ಅಪಾರ್ಟ್'ಮೆಂಟ್'ನಲ್ಲಿ ಇದೀಗ ಸೆಕ್ಯುರಿಟಿ ಗಾರ್ಡ್ ಗಳಾರೂ ಇಲ್ಲದ ಕಾರಣ ಅಲ್ಲಿನ ನಿವಾಸಿಗಳೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ. 

ಶ್ರೀನಾಥ್ ಅವರು ಇತ್ತೀಚೆಗಷ್ಟೇ ತಮ್ಮ ಪಾಲಿನ ಪಾಳಿಯ ಕೆಲಸ ಪೂರ್ಣಗೊಳಿಸಿದ್ದು, ಈ ಕುರಿತ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ನಾವು ನೆಲೆಸಿರುವ ಜಾಗದಲ್ಲಿನ ಸಮುದಾಯಕ್ಕಾಗಿ ಏನಾದರೂ ಮಾಡಬೇಕೆಂದರೆ ಬಹಳ ಸಂತೋಷವಾಗುತ್ತದೆ. ಅಪಾರ್ಟ್'ಮೆಂಟ್'ಗೆ ಕೆಲ ತಿಂಗಳುಗಳ ಹಿಂದಷ್ಟೇ ಬಂದಿದ್ದೆವು. ಇಲ್ಲಿ ನೆಲೆಸಿರುವ ಬಹಳಷ್ಟು ಜನರು ನನಗೆ ಗೊತ್ತಿಲ್ಲ. ಆದರೆ, ಸೆಕ್ಯುರಿಟಿ ಗಾರ್ಡ್ ಮೂಲಕ ಇದೀಗ ಎಲ್ಲರೂ ಪರಿಚಯವಾಗುತ್ತಿದ್ದಾರೆಂದು ವಸಿಷ್ಠ ಅವರು ಹೇಳಿದ್ದಾರೆ. 

ಸೆಕ್ಯುರಿಟಿ ಗಾರ್ಡ್'ಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರ ಜೊತೆಗಿದ್ದ ಮೂವರನ್ನೂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಅಪಾರ್ಟ್'ಮೆಂಟ್ ಕಮಿಟಿಯವರು 10 ದಿನಗಳ ಕಾಲ ರಕ್ಷಕ್ ಕೆಲಸವನ್ನು ಇಲ್ಲಿನ ನಿವಾಸಿಗಳೇ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಹಾಗಾಗಿ ನಾನು ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆಯವರೆಗೆ ನನ್ನ ಪಾಳಿಯ ಕೆಲಸವನ್ನು ಗೇಟ್ ಬಳಿ ಕುಳಿತುಕೊಂಡು ಮಾಡುತ್ತಿದ್ದೇನೆ. ನಿನ್ನೆ ರಾತ್ರಿ ಶಿಫ್ಟ್ ನ್ನು ನನ್ನ ಮಗ ಋತ್ವಿಕ್ ವಸಿಷ್ಠ ಮಾಡಿದ್ದ. ಇಂತಹದ್ದೊಂದು ಸಮಾಜ ಸೇವೆ ಮಾಡಿದ್ದಕ್ಕಾಗಿ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ. 

ವಿಜಯನಗರದ ಗೋಪಾಲನ್ ಬೃಂದಾವನ ಅಪಾರ್ಟ್'ಮೆಂಟ್'ಗೆ 11 ತಿಂಗಳ ಹಿಂದಷ್ಟೇ ಶ್ರೀನಾಥ್ ವಸಿಷ್ಠ ಅವರು ಬಂದಿದ್ದು, ಇದೇ ಏರಿಯಾದಲ್ಲಿಯೇ ಶ್ರೀನಾಥ್ ಅವರು ಮನೆಯೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. 

SCROLL FOR NEXT