ಸಿನಿಮಾ ಸುದ್ದಿ

ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ 'ಅಮೃತಮತಿ' ಆಯ್ಕೆ

Nagaraja AB

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಅಡಿಯಲ್ಲಿ ಪುಟ್ಟಣ್ಣ ನಿರ್ಮಾಣ ಹಾಗೂ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಕನ್ನಡ ಚಲನಚಿತ್ರ ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ  ಅಯ್ಕೆಯಾಗಿದೆ. 

ಕೊರೋನಾ ಬಿಕ್ಕಟ್ಟಿನ ಕಾರಣ, ಮೊದಲಿಗೆ ಆನ್ ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ಆಯೋಜಿಸಲಾಗಿದ್ದು, ಇದು ಜುಲೈ 22 ರಿಂದ ಆಗಸ್ಟ್ 5ರ ವರೆಗೆ ನಡೆಯಲಿದೆ. ಆನ್ ಲೈನ್ ಸ್ಕ್ರೀನಿಂಗ್ ಮಾಡಲ್ಪಟ್ಟ ಚಿತ್ರಗಳು ಸ್ಪರ್ಧಾಕಣದಲ್ಲಿಯೂ ಇರಲಿದ್ದು, ಫಲಿತಾಂಶವನ್ನು ಆನಂತರ ಪ್ರಕಟಿಸಲು ನೇರ ಪ್ರತ್ಯಕ್ಷ ಸಮಾರಂಭ ಆಯೋಜಿಸಲಾಗುತ್ತದೆ. 

ಆನ್ ಲೈನ್ ಸ್ಕ್ರೀನಿಂಗ್ ಆಗುವ ಚಿತ್ರಗಳ ಪಟ್ಟಿಯಲ್ಲಿ 'ಅಮೃತಮತಿ'ಯೂ ಸ್ಥಾನ ಪಡೆದಿದೆ.'ಅಮೃತಮತಿ' ಚಿತ್ರವು 13ನೇ ಶತಮಾನದಲ್ಲಿ ಕನ್ನಡದ ಖ್ಯಾತ ಕವಿ ಜನ್ನ ರಚಿಸಿದ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿದೆ. ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನಿಸಿ, ಮರುಸೃಷ್ಟಿ ಮಾಡಲಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಅಮೃತಮತಿ' ಪಾತ್ರದಲ್ಲಿ ಹರಿಪ್ರಿಯಾ ಅಭಿನಯಿಸಿದ್ದು, ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.ಉಳಿದಂತೆ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್ , ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮೀ ನಾರಾಯಣ್ ಇದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

SCROLL FOR NEXT