ಬೆಂಗಳೂರು: ಅಭಿಮಾನಿಗಳಿಂದ ಪ್ರೀತಿಯಿಂದ ಕಲಿಯುಗದ ಕರ್ಣ, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಎಂದು ಕರೆಯಿಸಿಕೊಳ್ಳುವ ಅಂಬರೀಷ್ ಅವರ ಜನ್ಮಜಯಂತಿ ಇಂದು.
1952ರ ಮೇ 29ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ ಹುಚ್ಚೇಗೌಡ ಮತ್ತು ಅಮರನಾಥ್ ದಂಪತಿಯ ಏಳು ಮಕ್ಕಳಲ್ಲಿ ಆರನೆಯವನಾಗಿ ಹುಟ್ಟಿದ ಅಂಬರೀಷ್ ಅವರ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ.
ನಂತರ ಬೆಳೆದು ದೊಡ್ಡವರಾದ ಮೇಲೆ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದು ಅಂಬರೀಷ್ ಆಗಿ ಜನಮಾನಸದಲ್ಲಿ ಮೆರೆದು ನಂತರದ ದಿನಗಳಲ್ಲಿ ರಾಜಕೀಯಕ್ಕೂ ಧುಮುಕಿ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ, ಕೇಂದ್ರ ಸಚಿವರಾಗಿ ಬೆಳೆದದ್ದು ಈಗ ಇತಿಹಾಸ.
ಅವರು ಗತಿಸಿ ಎರಡೂವರೆ ವರ್ಷಗಳಾಗಿದೆ, ಅವರ ಜನ್ಮ ಜಯಂತಿ ಮತ್ತು ಪುಣ್ಯತಿಥಿಯನ್ನು ಕುಟುಂಬಸ್ಥರು, ಅಭಿಮಾನಿಗಳು ತಪ್ಪದೆ ಆಚರಿಸುತ್ತಾರೆ.
ಈ ಬಾರಿ ಕೊರೋನಾ ಎರಡನೇ ಅಲೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಆಚರಣೆ ಬೇಡ ಎಂದು ಅವರ ಪತ್ನಿ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಮನವಿ ಮಾಡಿದ್ದಾರೆ.
ಇಂದು ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ ಎಂದು ಕೇಳಿಕೊಂಡಿದ್ದಾರೆ.
The entire nation is fighting to prevent the spread of #COVID19, I humbly request Rebel Star #Ambareesh fans not to have any public celebrations this year, let us celebrate our Dearest Ambi 69th jayanthi in our hearts and minds #StaySafe pic.twitter.com/t5PDI4LAGl
— Sumalatha Ambareesh