ಸಿನಿಮಾ ಸುದ್ದಿ

ಕನ್ನಡದ 'ಯುವರತ್ನ' ಮರೆಯಾಗಿ ಒಂದು ವಾರವಾದರೂ ನಿಲ್ಲದ ಅಭಿಮಾನಿಗಳ ಶೋಕ: ಅಪ್ಪು ಸಮಾಧಿಗೆ ಹರಿದು ಬರುತ್ತಿದೆ ಜನಸಾಗರ

Sumana Upadhyaya

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ನಿಧನರಾಗಿ ಒಂದು ವಾರವಾಗಿದೆ. ಆದರೆ ಅಭಿಮಾನಿಗಳ ಕಣ್ಣೀರು, ಶೋಕ ಮಾತ್ರ ನಿಂತಿಲ್ಲ. 

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಅಪ್ಪು ಸಮಾಧಿಗೆ ಜನಸಾಗರ ಹರಿದು ಬರುತ್ತಲೇ ಇದೆ. ಧಾರಾಕಾರ ಮಳೆಯನ್ನು ಕೂಡ ಲೆಕ್ಕಿಸದೆ ಪುನೀತ್ ಸಮಾಧಿಗೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಬಂದು ತಮ್ಮ ನೆಚ್ಚಿನ ನಟನ ಸಮಾಧಿಗೆ ನಮನ ಸಲ್ಲಿಸಿ ಹೋಗುತ್ತಿದ್ದಾರೆ. ಪೊಲೀಸರು ಸ್ಥಳದಲ್ಲಿ ನಿಯೋಜನೆಗೊಂಡು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.

550 ಚಿತ್ರಮಂದಿರಗಳಲ್ಲಿ ನಮನ: ಈ ಮಧ್ಯೆ ನಾಳೆ ಭಾನುವಾರ ಸಂಜೆ ರಾಜ್ಯದ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪುನೀತ್ ರಾಜ್ ಕುಮಾರ್ ಗೆ ಪುಷ್ಪ ನಮನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಅಗಲಿದ ಯುವರತ್ನನಿಗೆ ಗೌರವಪೂರ್ವಕ ನಮನ ಸಲ್ಲಿಸಲು ಚಿತ್ರ ವಿತರಕರು ನಿರ್ಧರಿಸಿದ್ದು ವಿ ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡಿನ ಮೂಲಕ ಒಂದೇ ಸಮಯದಲ್ಲಿ ಸಂಜೆ 6 ಗಂಟೆಗೆ ಚಿತ್ರನಮನ ಸಲ್ಲಿಸಲಾಗುತ್ತದೆ. 

ಇನ್ನು ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಿನಿ ತಾರೆಯರು ಬೆಂಗಳೂರಿನ ಅಪ್ಪು ನಿವಾಸಕ್ಕೆ ಆಗಮಿಸಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದರೆ, ಕಂಠೀರವ ಸ್ಟುಡಿಯೊಕ್ಕೆ ತೆರಳಿ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ನಿನ್ನೆ ತಮಿಳು ನಟರಾದ ಸೂರ್ಯ ಮತ್ತು ರಾಜೇಂದ್ರ ಪ್ರಸಾದ್ ಆಗಮಿಸಿದ್ದರು. ಇಂದು ನಟ ಅಲ್ಲು ಅರ್ಜುನ್, ವಿಶಾಲ್ ಬರುವ ಸಾಧ್ಯತೆಯಿದೆ.

SCROLL FOR NEXT