ಸಿನಿಮಾ ಸುದ್ದಿ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್‌ಗೆ ಶೂಟಿಂಗ್‌ ವೇಳೆ ಕಪಾಳಮೋಕ್ಷ

Ramyashree GN

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಕಿರುತೆರೆ ನಟ ಚಂದನ್ ಅವರ ಮೇಲೆ ತೆಲುಗು ಧಾರಾವಾಹಿ ಚಿತ್ರೀಕರಣದ ವೇಳೆ ಹಲ್ಲೆ ನಡೆದಿದೆ. ಈ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ‘ಸಾವಿತ್ರಮ್ಮಗಾರು ಅಬ್ಬಾಯಿ’ ಎಂಬ ತೆಲುಗು ಧಾರಾವಾಹಿಯ ಶೂಟಿಂಗ್ ವೇಳೆ ತಂತ್ರಜ್ಞರ ಸಿಬ್ಬಂದಿಯೊಬ್ಬ ಚಂದನ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಈ ಕುರಿತು ಖಾಸಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಂದನ್, ಈ ಘಟನೆ ಜುಲೈ 31 ರಂದು ನಡೆದಿತ್ತು. ಸಣ್ಣ ಕಾರಣಕ್ಕೆ ಕ್ಯಾಮೆರಾಮೆನ್ ಜೊತೆಗೆ ಇರುಸುಮುರಿಸು ಉಂಟಾಗಿತ್ತು. ಆತ ಯಾರನ್ನೋ ಕರೆದುಕೊಂಡು ಬಂದು ನನ್ನ ಜೊತೆ ಕೆಟ್ಟದಾಗಿ ವರ್ತಿಸಿದ್ದಾನೆ. ನಾನು ಆ ಘಟನೆಯನ್ನು ಅಲ್ಲೇ ಮರತಿದ್ದೇನೆ ಎಂದಿದ್ದಾರೆ.

‘ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಚಿಂತೆಯಲ್ಲಿ ನಾನಿದ್ದೆ. ಪರಿಸ್ಥಿತಿ ಹೀಗಿದ್ದರೂ ಕೂಡ ನಾನು ಚಿತ್ರೀಕರಣಕ್ಕೆಂದು ಹೈದರಾಬಾದ್‌ಗೆ ಬಂದಿದ್ದೆ. ಧಾರಾವಾಹಿಯ ಸಹಾಯಕ ನಿರ್ದೇಶಕ ರಂಜಿತ್ ಸ್ವಲ್ಪ ತರಲೆ. ಭಾನುವಾರ ಮಧ್ಯಾಹ್ನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವೇಳೆ ಕರೆದರು. ತಲೆ ನೋವಿದೆ ನಂತರ ಬರುತ್ತೇನೆ ಎಂದೆ. ಬಳಿಕ ಎಬ್ಬಿಸೋ ಅವನನ್ನು ಎಂದು ನನ್ನ ಸಹಾಯಕರಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಇದನ್ನು ನಾನು ಪ್ರಶ್ನಿಸಿದೆ. ಇದೇ ವಿಚಾರ ಮಾತನಾಡುವಾಗ ಸಲುಗೆಯಿಂದ ನಾನು ಆತನನ್ನು ಸ್ವಲ್ಪ ತಳ್ಳಿದೆ. ಇದನ್ನೇ ಹಲ್ಲೆ ಎಂದು ಆತ ನಿರ್ದೇಶಕರ ಬಳಿ ದೂರು ಹೇಳಿದ. ಬಳಿಕ ಈ ಘಟನೆ ನಡೆಯಿತು. ಇದನ್ನು ಮುಂದುವರಿಸಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ.

SCROLL FOR NEXT