ಚೊಚ್ಚಲ ಸಿನಿಮಾ ಗುಲ್ಟೂ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನವೀನ್ ಶಂಕರ್ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಮೂಲತಃ ನಮ್ಮವರೇ ಎಂಬ ಟೈಟಲ್ ನ ಚಿತ್ರೀಕರಣ ಮುಗಿಸಿದ್ದಾರೆ.
ರಂಗಭೂಮಿ ನಂಟಿರುವ ಚೇತನ್ ಭಾಸ್ಕರಯ್ಯ 'ಮೂಲತಃ ನಮ್ಮವರೇ' ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ. 'ನನಗೆ ಸಿನಿಮಾ ನಿರ್ದೇಶನದಲ್ಲಿ ತುಂಬ ಆಸಕ್ತಿ ಇತ್ತು. ಈ ಹಿಂದೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನಗೆ ಮೊದಲ ಚಿತ್ರ.
'ಮೂಲತ: ನಮ್ಮವರೇ' ಇದೊಂದು ಕೌಟುಂಬಿಕ ಚಿತ್ರ. ಅಪ್ಪ- ಮಗನ ಬಾಂಧವ್ಯದ ಸನ್ನಿವೇಶಗಳೇ ಈ ಚಿತ್ರದ ಹೈಲೆಟ್ . ಬೆಂಗಳೂರು ಹಾಗೂ ಕರಾವಳಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ನವೀನ್ ಶಂಕರ್ ಬಿಟ್ಟರೆ ಬಹುತೇಕರಿಗೆ ಇದು ಮೊದಲ ಸಿನಿಮಾ' ಎಂದರು ನಿರ್ದೇಶಕ ಚೇತನ್ ಭಾಸ್ಕರಯ್ಯ.
ಅಂದಹಾಗೆ, ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಮುಂಬೈನ ತಾನ್ಯಾ ಈ ಚಿತ್ರದ ನಾಯಕಿ. ಅವಿನಾಶ್, ಮಾಳವಿಕಾ ಅವಿನಾಶ್, ತೆಲುಗಿನ ಸತ್ಯಪ್ರಕಾಶ್, ಕಾವ್ಯಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
'ಮೂಲತಹ ನಮ್ಮವರೇ' ಮ್ಯೂಸಿಕ್ ಬ್ಯಾಂಡ್ ಏಕ್ ಕ್ಯಾಬ್ ಸಂಗೀತ ನೀಡಲಿದ್ದು, ಜುವೀನ್ ಸಿಂಗ್ ಹಿನ್ನೆಲೆ ಸಂಗೀತದ ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ಚಂತು ಅವರ ಛಾಯಾಗ್ರಹಣವಿದೆ.